ಸನ್ಮಾರ್ಗ ವಾರ್ತೆ
ಮಂಗಳೂರು, ಎಪ್ರಿಲ್ 1- ಮಂಗಳೂರಿಗಿಂತ ಹತ್ತು ಕಿಲೋಮೀಟರ್ ದೂರದ ತೊಕ್ಕೊಟ್ಟಿನ ಮಸೀದಿಯೊಂದರ ಅಧ್ಯಕ್ಷರಿಗೆ ಕೊರೋನಾ ತಗುಲಿದೆ ಮತ್ತು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಟಿವಿ ಚಾನೆಲ್ ಒಂದು ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ತೊಕ್ಕೊಟ್ಟಿನಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಇಲ್ಲಿನ ಪ್ರಮುಖ ಮಸೀದಿ ಮಸ್ಜಿದುಲ್ ಹುದಾದ ಅಧ್ಯಕ್ಷ ಇಸ್ಮಾಯಿಲ್ ಮತ್ತು ಕಾರ್ಯದರ್ಶಿ ಅಬ್ದುಲ್ ಕರೀಂ ಅವರಿಗೆ ಬೇರೆ ಬೇರೆ ಕಡೆಯಿಂದ ಅನೇಕ ಕರೆಗಳು ಬಂದಿದ್ದು ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿಯವರು ಸ್ಪಷ್ಟೀಕರಣ ನೀಡಿದ್ದಾರೆ. ಅಧ್ಯಕ್ಷ ಇಸ್ಮಾಯಿಲ್ ಅವರು ದೆಹಲಿಯ ತಬ್ ಲೀಗ್ ಜಮಾಅತಿನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಮತ್ತು ಅವರಿಗೂ ಆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ, ಅವರು ಕ್ಷೇಮವಾಗಿ ಇದ್ದಾರೆ ಎಂದವರು ವಿಡಿಯೋದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಇದೇವೇಳೆ,
ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅವರು ಸನ್ಮಾರ್ಗದೊಂದಿಗೆ ಮಾತಾಡಿದ್ದು, ತಾನು ಕ್ಷೇಮವಾಗಿರುವೆ, ತನಗೂ ತಬ್ ಲೀಗ್ ಜಮಾಅತಿಗೂ ಸಂಬಂಧ ಇಲ್ಲ, ತಾನು ಆ ಸಮ್ಮೇಳನಕ್ಕೆ ಹೋದವನೂ ಅಲ್ಲ. ತನಗೂ ಬೇರೆಬೇರೆ ಕಡೆಯಿಂದ ಕರೆ ಬಂದಿದೆ ಎಂದವರು ಹೇಳಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.