ಮಹಿಳೆ ಚಲಾಯಿಸಿದ ಸ್ಕೂಟರಿಗೆ ಆಟೊರಿಕ್ಷಾ ಢಿಕ್ಕಿ: ಜನರ ಹಲ್ಲೆಯಿಂದ ಪ್ರಜ್ಞೆ ಕಳಕೊಂಡ ಆಟೊ ಚಾಲಕ

0
702

ಸನ್ಮಾರ್ಗ ವಾರ್ತೆ

ಭೋಪಾಲ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಟೋಚಾಲಕನ್ನು ರಸ್ತೆಗೆ ಎಳೆದು ಹಾಕಿ ಕಬ್ಬಿಣದ ಪ್ಲೇಟ್‌ನಿಂದ ಹೊಡೆಯುತ್ತಿರುವ ದೃಶ್ಯಗಳು ಬಹಿರಂಗವಾಗಿದೆ. ಮಹಿಳೆ ಚಲಾಯಿಸುತ್ತಿದ್ದ ಸ್ಕೂಟರಿಗೆ ಆಟೊರಿಕ್ಷಾ ಬಡಿದಿತ್ತು. ನಂತರ ಸಂಬಂಧಿಕರೆನ್ನಲಾದ ಯುವಕರು ರಿಕ್ಷಾ ಚಾಲಕನನ್ನು ರಸ್ತೆಗೆ ಎಳೆದು ಹಾಕಿ ಹೊಡೆದಿದ್ದಾರೆ. ಚಾಲಕ ಮೂರ್ಛೆ ಹೋಗುವವರೆಗೆ ಅವರು ಹೊಡೆದಿದ್ದಾರೆ. ಬೆನ್ನೆಲುಬು ಮುರಿತಕ್ಕೊಳಗಾದ ಚಾಲಕನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.

ಅಧಾರರ್ತಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತ್ ವಿಶ್ವಕರ್ಮ ಎಂಬವರು ಚಲಾಯಿಸುತ್ತಿದ್ದ ಆಟೊ ರಿಕ್ಷಾ ಇಬ್ಬರು ಮಹಿಳೆಯರು ಹೋಗುತ್ತಿದ್ದ ಸ್ಕೂಟರ್‌‌ಗೆ ಢಿಕ್ಕಿಯಾದ ಘಟನೆಯು ರವಿವಾರ ನಡೆದಿತ್ತು. ಅಪಘಾತದಲ್ಲಿ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಅಪಘಾತ ನಡೆದಿದ್ದು ತಿಳಿದ ಕೂಡಲೇ ಅಲ್ಲಿಗೆ ಬಂದ ಮಹಿಳೆಯ ಪರಿಚಯಸ್ಥರು ಅಲ್ಲಿಗೆ ಕಾರಿನಲ್ಲಿ ಬಂದು ಆಟೋ ಚಾಲಕನ್ನು ರಸ್ತೆಗೆ ಎಳೆದು ಹಾಕಿ ಹೊಡೆದರು.
ಆಟೊ ಚಾಲಕನನ್ನು ಆರೋಪಿಗಳು ರಸ್ತೆಗೆ ಎಳೆದು ಹಾಕಿ ಕಬ್ಬಿಣದ ಪ್ಲೇಟ್‌ನಿಂದ ಕ್ರೂರವಾಗಿ ಹೊಡೆಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಅಭಿಶೇಕ್ ದುಬೆ, ಚಂದನ್ ಸಿಂಗ್ ಚಾಲಕನಿಗೆ ಹೊಡೆಯುವುದು ಕಾಣಿಸುತ್ತಿದೆ. ಪೊಲೀಸರು ಇಬ್ಬರ ಮೇಲೆ ಕೊಲೆ ಯತ್ನ ಆರೋಪ ಹೊರಿಸಿ ಕೇಸು ದಾಖಲಿಸಿದ್ದಾರೆ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ್ದಕ್ಕಾಗಿ ಆಟೋ ಚಾಲಕನ ವಿರುದ್ಧವೂ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.