ಸನ್ಮಾರ್ಗ ವಾರ್ತೆ
ಮಂಗಳೂರು: ಖ್ಯಾತ ವಿದ್ವಾಂಸರೂ, ವಿವಿಧ ಜಿಲ್ಲೆಗಳ ಖಾಝಿ ಹಾಗೂ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬೇಕಲ ಉಸ್ತಾದರೆಂದೇ ಪ್ರಸಿದ್ಧಿ ಪಡೆದ ಸುನ್ನೀ ನೇತಾರರಾಗಿದ್ದ ಇಬ್ರಾಹೀಮ್ ಮುಸ್ಲಿಯಾರರ ನಿಧನ ಮುಸ್ಲಿಮ್ ಸಮಾಜಕ್ಕೂ ನಾಡಿಗೂ ಅಪಾರ ನಷ್ಟವಾಗಿದ್ದು ಜಮಾಅತೆ ಇಸ್ಲಾಮೀ ಹಿಂದ್ ಅವರ ನಿಧನಕ್ಕೆ ಅಗಾಧವಾದ ಸಂತಾಪವನ್ನು ವ್ಯಕ್ತಪಡಿಸಿದೆ.
ಸರಳ ವ್ಯಕ್ತಿತ್ವದ, ನೇರ ನಡೆ-ನುಡಿಯ ಬೇಕಲ ಉಸ್ತಾದರು ಮುಸ್ಲಿಮ್ ಸಮುದಾಯದ ಏಳಿಗೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದರು.
ಮುಸ್ಲಿಮ್ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸಲ್ಪಟ್ಟ CAA, NRC, NPR ಮುಂತಾದ ಕರಾಳ ಕಾನೂನುಗಳನ್ನು ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸಿದ ಸಂದರ್ಭಗಳಲ್ಲಿ ಅದರ ವಿರುದ್ಧ ನಡೆದ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಸಮಾಜದ ಎಲ್ಲ ವರ್ಗದ ಜನರೊಂದಿಗೆ ಅನ್ಯೋನ್ಯತೆಯಲ್ಲಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಸ್ಥಾನೀಯ ಶಾಖೆಯ ನಿಯೋಗವೊಂದು ಅವರನ್ನು ಮನೆಯಲ್ಲಿ ಭೇಟಿಯಾಗಿದ್ದಾಗ ಜಮಾಅತ್ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಅವರ ನಿಧನ ವಾರ್ತೆ ತಿಳಿದಾಗ ಜಮಾಅತೆ ಇಸ್ಲಾಮೀ ನಿಯೋಗ ಅವರ ಪಾರ್ಥಿವ ಶರೀರವಿದ್ದ ಸ್ಥಳಕ್ಕೆ ಭೇಟಿ ನೀಡಿತು. ಜಮಾಅತ್ ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು, ದ.ಕ.ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯಿಲ್, ಪಕ್ಕಲಡ್ಕ ವರ್ತುಲ ಸಂಚಾಲಕ ಯೂಸುಫ್ ಪಕ್ಕಲಡ್ಕ, ಹಾಗೂ ಎಸ್.ಐ.ಓ ದ.ಕ.ಜಿಲ್ಲಾಧ್ಯಕ್ಷ ಅಶೀರುದ್ದೀನ್ ಆಲಿಯಾ ಇದ್ದರು.