ಕಳೆದ ಅಕ್ಟೊಬರ್ ನಲ್ಲಿ ಸಿಬಿಐ ನಿರ್ದೇಶಕರಾದಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ತಾನರನ್ನು ಪದಚ್ಯುತಿಗೊಳಿಸಿದ ಕೇಂದ್ರಸರ್ಕಾರದ ಕ್ರಮವನ್ನು ಇವತ್ತು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು ಆ ಕ್ರಮ ಅಸಾಧು ಎಂದು ತೀರ್ಪಿತ್ತಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಕೆ.ಎಂ.ಜೋಸೆಫ್ ಅವರಿದ್ದ ಪೀಠವು ಈ ತೀರ್ಪನ್ನು ನೀಡಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಭಾರೀ ಹಿನ್ನಡೆಯುಂಟಾಗಿದೆ. ತನ್ನ ಸ್ಥಾನ ಭ್ರಷ್ಟ ಗೊಳಿಸಿದ್ದ ಕೇಂದ್ರ ಸರಕಾರದ ಕ್ರಮವನ್ನು ಅಲೋಕ್ ವರ್ಮಾ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಇದೀಗ ಅಲೋಕ್ ವರ್ಮಾರನ್ನು ಮತ್ತೆ ಸಿಬಿಐ ನಿರ್ದೇಶಕರನ್ನಾಗಿ ನಿಯೋಜಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಒಂದು ತಿಂಗಳ ಹಿಂದಷ್ಟೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಬಿಜೆಪಿಯ ಪಾಲಿಗೆ ಇದು ಇನ್ನಷ್ಟು ಹೊಡೆತವನ್ನು ನೀಡಲಿದೆಯೆಂದು ಹೇಳಲಾಗುತ್ತಿದೆ.
ಅಲೋಕ್ ವರ್ಮಾರನ್ನು ಪದಚ್ಯುತಿಗೊಳಿಸಿದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿತ್ತು. ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಒಲವು ತೋರಿದ್ದೇ ಅಲೋಕ್ ವರ್ಮಾರ ಪದಚ್ಯುತಿಗೆ ಕಾರಣ ಎಂದು ಅದು ಆರೋಪಿಸಿತ್ತು. ಇದೀಗ ಮೋದಿ ಸರಕಾರವನ್ನು ಹಣಿಯಲು ಕಾಂಗ್ರೆಸ್ ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.