ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 25: ದಿಲ್ಲಿಯ ಜಾಫರಾಬಾದಿನ ಚಾಂದ್ಬಾಗ್ನಲ್ಲಿ ಗಲಭೆಗೆ ಕರೆ ನೀಡಿದವರು ಮತ್ತು ದುಷ್ಕರ್ಮಿಗಳು ಮುಸ್ಲಿಂ ಆರಾಧಾನಾಲಯಗಳನ್ನು ಗುರಿಮಾಡಿಕೊಂಡಿದ್ದರು. ಹೆಲ್ಮೆಟ್ ಧರಿಸಿದ ಸಿಎಎ ಪರ ದುಷ್ಕರ್ಮಿಗಳು ಮುಸ್ಲಿಂ ಆರಾಧಾನಲಯದ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಚಿತ್ರಗಳು ಹೊರಬಂದಿವೆ. ಬಾಟ್ಲಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ದರ್ಗದ ಮೇಲೆ ಅದನ್ನು ಎಸೆದಿದ್ದಾರೆ. ಜೈಶ್ರೀರಾಂ ಕೂಗುತ್ತಾ ಹಿಂದೂ ಎಚ್ಚೆದ್ದಿದ್ದಾರೆ ಎಂದು ಘೋಷಿಸಿ ಸಿಎಎ ಪರರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಕಪಿಲ್ ಶರ್ಮರ ದ್ವೇಷಪೂರಿತ ಕರೆಯ ನಂತರ ಜಾಫರಾಬಾದಿನಲ್ಲಿ ಸಿಎಎ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ದಾಳಿಮಾಡಿದ್ದಾರೆ. ಮೌಜ್ಪುರ, ಗೋಕುಲ್ಪುರಿ, ಬಾಬರ್ಪುರಿ, ಜೊಹ್ರಿ ಎನ್ಕ್ಲೇವ್, ಶಿವ ವಿಹಾರ್, ಚಾಂದ್ಬಾಗ್ಗಳಲ್ಲಿ ಸಿಎಎ ಬೆಂಬಲಿಗರು ಹಿಂಸಾಚಾರ ನಡೆಸಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ವಿರುದ್ಧ ಹೋರಾಟಗಾರರ ಮೇಲೆ ವ್ಯಾಪಕ ದಾಳಿ ನಡೆದಿದ್ದು ಹೆಡ್ ಕಾನ್ಸಟೇಬಲ್ ಸಹಿತ ಐವರು ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿಗೆ ಗುಂಡು ತಗಲಿದೆ. ಗಾಯಾಳುಗಳಾದ ಹತ್ತು ಮಂದಿ ಪೊಲೀಸರು ಮತ್ತು 56 ಮಂದಿ ಪ್ರತಿಭಟನಾಕಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.