ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮುಸ್ಲಿಮ್ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆಯೇ ಎಂಬುದನ್ನು ಚೀಫ್ ಜಸ್ಟಿಸ್ ಯು.ಯು ಲಲಿತ್ರವರ ಅಧ್ಯಕ್ಷತೆಯ ಐವರ ಸದಸ್ಯರ ಸಾಂವಿಧಾನಿಕ ಪೀಠ ತೀರ್ಮಾನಿಸಲಿದೆ. 2005ರಲ್ಲಿ ಆಂಧ್ರಪ್ರದೇಶದಲ್ಲಿ ಹಿಂದುಳಿದ ಸಮುದಾಯ ಎಂಬ ನೆಲೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದ್ದು ಇದನ್ನು ರದ್ದುಪಡಿಸುವ ಅರ್ಜಿಯಲ್ಲಿ ಯು.ಯು.ಲಲಿತ್ ಪೀಠ ತೀರ್ಪು ನೀಡಲಿದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಗೆ ಅವಕಾಶ ಕೊಡುವ 103ನೇ ಸಂವಿಧಾನ ತಿದ್ದುಪಡಿಯ ಸಿಂಧುತ್ವದ ವಿಷಯವನ್ನು ಈ ಪೀಠ ತೀರ್ಮಾನಿಸುತ್ತದೆ.
ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸೆಪ್ಟಂಬರ್ ಆರಕ್ಕೆ ವಿಚಾರಣೆಗೆತ್ತಿಕೊಂಡು ತೀರ್ಪು ನೀಡುವ ಸಮಯವೆಂದು ಕೋರ್ಟು ನಿಶ್ಚಯಿಸಿದೆ. ಒಂದು ಸಮುದಾಯ ಎಂಬ ನೆಲೆಯಲ್ಲಿ ಮುಸ್ಲಿಮರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಸಂವಿಧಾನದ 15ನೇ 16ನೇ ಪರಿಚ್ಛೇದಗಳ ಪ್ರಕಾರ ನಿರ್ಧರಿಸಬಹುದೇ ಎಂಬುದು ಆಂಧ್ರಪ್ರದೇಶದ ಪ್ರಕರಣದ ಸಾರಾಂಶವಾಗಿದೆ.
ಪರಸ್ಪರ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಆರ್ಥಿಕ ಮೀಸಲಾತಿ ಮೊದಲು ನಂತರ ಮುಸ್ಲಿಮರ ಮೀಸಲಾತಿ ವಿಚಾರಣೆ ಆಲಿಕೆ ನಡೆಸಲಾಗುವುದು ಎಂದು ಯು.ಯು ಲಲಿತ್ ತಿಳಿಸಿದರು. ಕೇಸಿನಲ್ಲಿ ನೋಡಲ್ ವಕೀಲರಾಗಿ ಶಾದಾನ್ ಫರಸತ್, ನಚಿಕೇತ ಜೋಷಿ, ಮಹ್ಫೂಝ್ ನಸ್ಕಿಯವರನ್ನು ಕೋರ್ಟು ನೇಮಿಸಿದೆ.