ಸನ್ಮಾರ್ಗ ವಾರ್ತೆ
ಬೆಂಗಳೂರು: “ಬಿಜೆಪಿ ಸರಕಾರದ ಪಾಪದ ಕತೆಯನ್ನು ಬಿಚ್ಚಿಡಲು ನಾಳೆಯಿಂದ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು. ಅವರು ಮುಂದುವರಿಯುತ್ತಾ, ಇಡೀ ವಿಶ್ವದಲ್ಲಿ ಕರ್ನಾಟಕದ ಬಗ್ಗೆ ದೊಡ್ಡ ಗೌರವವಿತ್ತು. ಬಿಜೆಪಿ ಸರಕಾರದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. “ರೈತರ ಬದುಕು ಸಂಕಷ್ಟದಲ್ಲಿದೆ. ನಿರುದ್ಯೋಗ ಹೆಚ್ಚಾಗುತ್ತಿದೆ. ಐಎಎಸ್ ಅಧಿಕಾರಿಗಳು ಜೈಲು ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ದ್ವನಿಯೆತ್ತಿದರೆ ನಮ್ಮ ವಿರುದ್ದ ಪ್ರಕರಣ ದಾಖಲಿಸುತ್ತಿದ್ದಾರೆ” ಎಂದು ಹೇಳಿದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೇವಲ ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ಮೇಲೆ 83 ಸಾವಿರ ಸಾಲ ಇದೆ. ಹೀಗಾದರೆ ರಾಜ್ಯ ಉಳಿಯುವುದೇ? ಎಂದು ಕೇಳಿದ ಅವರು, ಬಿಜೆಪಿಯ ದುರಾಡಳಿತದ ಪಟ್ಟಿ ಮಾಡಿ ಅದಕ್ಕೆ ಬಿಜೆಪಿ ಪಾಪದ ಪುರಾಣ ಅಂತ ನಾಮಕರಣ ಮಾಡಿದ್ದೇವೆ ಎಂದರು.
ನಂತರ ಬಿಜೆಪಿ ಪಾಪದ ಪುರಾಣದ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಚಾರ್ಜ್ ಶೀಟ್ ಬಿಡುಗಡೆ ಮಾಡಿದರು. ಅದರಲ್ಲಿ ಸರಕಾರದ ವೈಫಲ್ಯತೆಯ ಪಟ್ಟಿ ಮಾಡಲಾಗಿದೆ. ಶೇಕಡಾ 90 ರಷ್ಟು ಪ್ರಣಾಳಿಕೆ ಭರವಸೆ ಈಡೇರಿಲ್ಲ. ದೇಶದಲ್ಲಿ ಅತೀ ಹೆಚ್ಚು ರೈತರ ಸಾವಿನ ಪ್ರಕರಣ, ಶೇಕಡಾ 145 ರಷ್ಟು ಅಡುಗೆ ಅನಿಲ ದರ ಏರಿಕೆ, 10.13 ಲಕ್ಷ ಮಕ್ಕಳು ಶಾಲೆ ತೊರೆದಿದ್ದಾರೆ. 2.52 ಲಕ್ಷದಷ್ಟು ಸರಕಾರಿ ಉದ್ಯೋಗಗಳು ಖಾಲಿ ಇವೆ ಮುಂತಾದ ಎಲ್ಲಾ ಅಂಶಗಳು ಜಾರ್ಜ್ ಶೀಟ್ನಲ್ಲಿದೆ.