ಸನ್ಮಾರ್ಗ ವಾರ್ತೆ
ಮಂಗಳೂರು : ಉಡುಪಿ ಮತ್ತು ದ.ಕ.ಜಿಲ್ಲೆಗಳಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದ ಮೇಲೆ ಕರಾವಳಿ ಎಂದರೆ ಅಸೂಯೆ, ದ್ವೇಷ ಸಾಧನೆ ಮತ್ತು ಕೋಮು ಗಲಭೆಗಳ ಆವಾಸ ಸ್ಥಾನ ಎಂಬ ಕುಖ್ಯಾತಿಗೊಳಪಟ್ಟು ನಾಡಿನ ಸಾಮರಸ್ಯ -ಅಭಿವೃದ್ಧಿ ಮರೀಚಿಕೆಯಾಗಿವೆ ಎಂಬ ಅಳಲು, ಉಡುಪಿ ಮತ್ತು ದ.ಕನ್ನಡದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ದೃಢ ನಿರ್ಧಾರಕ್ಕೆ ಬಂದಿರುವುದು ಈ ಎರಡೂ ಜಿಲ್ಲೆಗಳಲ್ಲಿ ಮೇಲ್ನೋಟಕ್ಕೇ ಕಾಣ ಸಿಗುತ್ತವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಪ್ರಗತಿಪರ ಚಿಂತನೆಯ, ಜನಪರ ಕಾಳಜಿಯ ವಿದ್ಯಾವಂತ ಅಭ್ಯರ್ಥಿಗಳಾದ ಶ್ರೀ ಜಯಪ್ರಕಾಶ್ ಹೆಗ್ಡೆ ಮತ್ತು ಪದ್ಮರಾಜ್ ರಾಮಯ್ಯ ಸ್ಪರ್ಧಿಸುವುದರಿಂದಲೂ ಮತದಾರರ ಒಲವು ಕಾಂಗ್ರೆಸ್ ಕಡೆಗೆ ಇಮ್ಮಡಿಗೊಳಿಸಿವೆ.
ಬಿಜೆಪಿಯ ಧರ್ಮ ರಾಜಕಾರಣದ ನೇರ ಪರಿಣಾಮ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳಿಗೆ ತಟ್ಟಿರುವುದರಿಂದ ಕರಾವಳಿಯು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಕಾರಣದಿಂದಲೂ ಆರ್ಥಿಕ ಸ್ಥಿತಿವಂತರೂ ಬಿಜೆಪಿಯ ಸಾಂಪ್ರದಾಯಿಕ ಮತದಾರರೂ ಬಿಜೆಪಿಯಿಂದ ದೂರವಾಗುತ್ತಿರುವುದರಿಂದ
ಕಾಂಗ್ರೆಸ್ ಪಕ್ಷ ಮತ್ತೆ ಕರಾವಳಿಯಲ್ಲಿ ಗತ ವೈಭವವನ್ನು ಸ್ಥಾಪಿಸುವುದು ಶತ ಸಿದ್ಧ ಎಂದೂ ಶ್ರೀ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.