ಸನ್ಮಾರ್ಗ ವಾರ್ತೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ವಿಪಕ್ಷಗಳ ಮೈತ್ರಿ ಇಂಡಿಯಾ ಒಕ್ಕೂಟ ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಪ್ರಜಾಪ್ರಭುತ್ವ ಉಳಿಸಿ ಘೋಷವಾಕ್ಯದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ.
ಪ್ರತಿಭಟನಾ ರ್ಯಾಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್, ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜಿನ ಖರ್ಗೆ, ರಾಹುಲ್ ಗಾಂಧಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಬೃಹತ್ ಸಮ್ಮೆಳನದಲ್ಲಿ ತೃಣಮೂಲ ಕಾಂಗ್ರೆಸ್ನ ಇಬ್ಬರು ಸಂಸದರು ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
“ಪ್ರಾಮಾಣಿಕತೆಯ ಆಡಳಿತ ಮುಗಿದ ಅಧ್ಯಾಯವಾಗಿದೆ. ಈ ವಾತಾವರಣದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳನ್ನು ಹೇಗೆ ಖಚಿತ ಪಡಿಸುತ್ತೀರಾ? ಅವರು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಅಪಹರಿಸಲು ಹೊರಟಿದ್ದಾರೆ. ಅವರ ಮುಖ್ಯ ಗುರಿ ವಿಪಕ್ಷಗಳು ಹಾಗೂ ಅವರ ನಾಯಕರಾಗಿದ್ದಾರೆ” ಎಂದು ರ್ಯಾಲಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ರ್ಯಾಲಿಯಲ್ಲಿ 20 ಸಾವಿರ ಜನರು ಪಾಲ್ಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ಸಮಾವೇಶದ ಪ್ರಮುಖ ಉದ್ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದಾಗಿದೆ ಎಂದು ದೆಹಲಿ ಸಚಿವೆ ಅತೀಶಿ ಹೇಳಿದರು.
ದೆಹಲಿ ಕಾಂಗ್ರೆಸ್ನ ಅಧ್ಯಕ್ಷರಾದ ಅರವಿಂದರ್ ಸಿಂಗ್ ಮಾತನಾಡಿ, ರ್ಯಾಲಿಯಲ್ಲಿ ಕಾಂಗ್ರೆಸ್ನಿಂದ ಅತ್ಯಧಿಕ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳುವಂತೆ ದೆಹಲಿಯ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷರಿಗೆ ಸೂಚಿಸಲಾಗಿದೆ. ವಿಪಕ್ಷಗಳ ನಾಯಕರ ಧನಿಯನ್ನು ಅಡಗಿಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವಾಗಿದೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಕಾರಣದಿಂದ ಜನರು ಆಗಮಿಸುವ ಪ್ರತಿಯೊಂದು ದ್ವಾರದಲ್ಲಿಯೂ ಅರೆಸೇನಾಪಡೆ ಸೇರಿದಂತೆ ಬಿಗಿಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನಾ ರಹಿತಾ, ಟ್ರಾಕ್ಟರ್ ರಹಿತ ಹಾಗೂ ಯಾವುದೇ ಆಯುಧಗಳನ್ನು ತರುವಂತಿಲ್ಲ ಎಂದು ಪೊಲೀಸರು ಆದೇಶಿಸಿದ್ದಾರೆ.