ಚೆನ್ನೈ, ಜೂ.29: ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಕೊಂದು ಟಾಯ್ಲೆಟ್ನಲ್ಲಿ ಎಸೆದು ಹೋದ ಘಟನೆಯಲ್ಲಿ ಮಾಜಿ ಸೈನಿಕ ತಮಿಳ್ನಾಡಿನ ತಿರುಮುಲ್ಲೈವಾದ ಅಂತೋಣಿ ನಗರದ ಮೀನಾಕ್ಷಿ ಸುಂದರಂ(60) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೆರೆ ಮನೆಯ ರಾಜೇಂದ್ರನ್ -ಚೆಂದಮಿ ಶೆಲ್ವಿ ದಂಪತಿಯ 4 ವರ್ಷದ ಪುತ್ರಿಯನ್ನು ಈತ ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಕ್ಕಾಗಿ ಈತನ ಪತ್ನಿ ರಾಜಮ್ಮನನ್ನು ಕೂಡ ಬಂಧಿಸಲಾಗಿದೆ.
ಗುರುವಾರ ಘಟನೆ ನಡೆದಿದ್ದು ರಾಜೇಂದ್ರನ್ ಅಂಬತ್ತೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದಾರೆ. ಅವರು ಎಂಟು ವರ್ಷದ ಪುತ್ರನನ್ನು ಟ್ಯೂಶನ್ ಸೆಂಟರ್ ಗೆ ಕರೆದುಕೊಂಡು ನಾಲ್ಕು ವರ್ಷದ ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಹೋಗಿದ್ದರು. ಮರಳಿ ಬಂದಾಗ ಮಗು ಕಂಡು ಬರಲಿಲ್ಲ. ಹುಡುಕಿದಾಗ ಮನೆಯ ಶೌಚಾಲಯದ ಬಕೆಟ್ನಲ್ಲಿ ಗೋಣಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು. ಅರೋಪಿಯ ಮನೆಯ ಮಲಗುವ ಕೋಣೆಯಲ್ಲಿ ಮಗುವಿನ ಕಿವಿಯೋಲೆ, ಕೂದಲುಗಳು ಕಂಡು ಬಂದಿವೆ. ಕರ್ಟನ್ ಮತ್ತು ಆರೋಪಿಯ ಲುಂಗಿಯಲ್ಲಿ ರಕ್ತಕಲೆ ಪತ್ತೆಯಾಗಿದೆ.