ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಅರ್ಚನಾ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ವಿರುದ್ಧ ಡಾ.ಅರ್ಚನಾ ಕರಿಕ್ಕಳ ಅವರು ದೂರು ನೀಡಿದ್ದು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಪ್ರಕರಣ ಹೀಗಿದೆ:
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬಾಲಕಿಯೊಬ್ಬಳು ದಾಖಲಾಗಿದ್ದಳು. ಅವಳನ್ನು ಭೇಟಿ ಮಾಡಲು ಜೂನ್ 29ರಂದು ಹೋದ ಜಿಪಂ ಅಧ್ಯಕ್ಷರು, ತಾನು ಕರೆದ ತಕ್ಷಣ ವಾರ್ಡಿಗೆ ಬಂದು ಮಾಹಿತಿ ನೀಡಲಿಲ್ಲ ಎಂಬ ಕಾರಣದಿಂದ ವೈದ್ಯರ ಕೊಠಡಿಗೆ ತೆರಳಿ ಬೆದರಿಕೆ ಒಡ್ಡಿದ್ದರು. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು.
ಆ ಬಳಿಕ ಜಿ.ಪಂ ಅಧ್ಯಕ್ಷರ ವಿರುದ್ದ ಡಾ. ಅರ್ಚನಾ ಪೊಲೀಸ್ ದೂರು ನೀಡಿದ್ದರು.
ತಾಲೂಕಿನ ಕೌಡಿಚಾರ್ ನಿವಾಸಿ ದಲಿತ ಬಾಲಕಿಯೊಬ್ಬಳು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತನಗೆ ಪೊಲೀಸರು ದೌರ್ಜನ್ಯ ನಡೆಸಿದುದರಿಂದ ಹೀಗಾಗಿದೆ ಎಂದು ಆಕೆ ಆರೋಪಿಸಿದ್ದಳು. ಆಕೆಯನ್ನು ನೋಡಲು ಜಿಪಂ ಅಧ್ಯಕ್ಷೆ ಹೋಗಿದ್ದರು.