‘ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ರಚನೆ ಮತ್ತು 500 ಕೋಟಿ ರೂ. ಅನುದಾನ ಒದಗಿಸಿ. ಇಲ್ಲವೇ ಹೋರಾಟ ನಡೆಸಲಾಗುವುದು; ಸತ್ಯಜಿತ್ ಸುರತ್ಕಲ್

0
156

ಸನ್ಮಾರ್ಗ ವಾರ್ತೆ

ಬೆಳಗಾವಿ ಅಧಿವೇಶನ ಮುಗಿದು ಹದಿನೈದು ದಿನಗಳ ಒಳಗೆ ಅಂದರೆ ಡಿಸೆಂಬರ್ 31ರ ಒಳಗೆ ಸಮಾಜದ ಪ್ರಮುಖರ ಸಭೆ ಕರೆದು “ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ” ರಚನೆ ಮತ್ತು 500 ಕೋಟಿ ರೂ. ಅನುದಾನ ಒದಗಿಸಬೇಕು. ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಲಾಗುತ್ತದೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದ್ದಾರೆ. ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಸುಮಾರು ಐದು ವರ್ಷಗಳ ಹಿಂದೆ ಬ್ರಹ್ಮಾವರದಲ್ಲಿ ಪ್ರಾರಂಭವಾದ ಬ್ರಹಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ” ಮತ್ತು ಇನ್ನಿತರ ಸಮಾಜಮುಖಿ ಬೇಡಿಕೆಗಳ ಹೋರಾಟ ಆ ನಂತರದ ದಿನಗಳಲ್ಲಿ ನಿರಂತರವಾಗಿ ನಡೆದು ಬಂದರೂ ಇಲ್ಲಿಯವರೆಗೆ ಸರ್ಕಾರ ಯಾವುದೇ ಬೇಡಿಕೆಗಳ ಈಡೇರಿಸುವಿಕೆಯಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ.

ನಾವು ಹೋರಾಟ ಪ್ರಾರಂಭ ಮಾಡಿದ ಮೇಲೆ ಸರ್ಕಾರ ಇತರ ಅನೇಕ ಸಮಾಜಗಳಿಗೆ ನೂರಾರು ಕೋಟಿ ರೂಪಾಯಿ ಅನುದಾನ ಇಟ್ಟು ಅಭಿವೃದ್ಧಿ ನಿಗಮ ರಚನೆ ಮಾಡಿದರೂ ನಮಗೆ ಅನ್ಯಾಯವನ್ನು ಮಾಡಿದೆ.

ಹಿಂದಿನ ಸರಕಾರ ಚುನಾವಣೆಗೆ ಕೇವಲ ಒಂದು ತಿಂಗಳು ಇರುವ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ “ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ”ದ ಆದೇಶ ಮಾಡಿತೇ ಹೊರತು ಯಾವುದೇ ಹಣಕಾಸು ನೆರವು ಒದಗಿಸಲಿಲ್ಲ. ಇನ್ನಿತರ ಹಿಂದುಳಿದ ವರ್ಗದ ಸಮುದಾಯಗಳಿಗೂ ಅದೇ ರೀತಿ ಹಿಂದಿನ ಸರಕಾರ ಮೋಸ ಮಾಡಿತು.

ಜಾತಿಗಣತಿ ಮತ್ತು ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಅಧ್ಯಯನದ ಕಾಂತರಾಜು ಆಯೋಗದ ವರದಿ ಜಾರಿಗೊಳಿಸಬೇಕು. ಹಾಗೆಯೇ ಪ್ರವರ್ಗ 2ಎಯಲ್ಲಿ ಇವತ್ತಿನ ದಿನ ಇರುವ 102 ಜಾತಿ ಸಮುದಾಯಗಳಿಗೆ ಇರುವ 15 ಶೇಕಡಾ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದರು.

ಅಲ್ಲದೇ ಮುಳುಗಡೆ ಸಂತ್ರಸ್ತರು, ಸಿಗಂದೂರು ಕ್ಷೇತ್ರ, ಮಂಗಳೂರು, ಶಿವಮೊಗ್ಗ ವಿಮಾನ ನಿಲ್ದಾಣಗಳ ನಾಮಕರಣ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅಧ್ಯಯನ ಪೀಠ, ಹಾಲ್ ನಿರ್ಮಾಣಗಳಿಗಾಗಿ ಸ್ಥಳ ಮೀಸಲು, ಮುಂತಾದ ಬೇಡಿಕೆ ಬಗ್ಗೆ ಸ್ಪಷ್ಟ ತೀರ್ಮಾನ 15 ದಿನಗಳ ಒಳಗಾಗಿ ತೆಗೆದುಕೊಳ್ಳಬೇಕು.

ತಪ್ಪಿದಲ್ಲಿ ಜನವರಿ 1ರ ನಂತರ ಸಮಾಜದ ಎಲ್ಲಾ ಸ್ವಾಮೀಜಿಗಳು, ಸಂಘ-ಸಂಸ್ಥೆಗಳು, ಸಂಘಟನೆಗಳು, ಹಿರಿಯರು, ಕ್ಷೇತ್ರದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟದ ರೂಪುರೇಷೆಯನ್ನು ನಿರ್ಧರಿಸಿ ಬೀದಿಗೆ ಇಳಿಯುವುದು ಆನಿವಾರ್ಯ ಎಂಬ ಎಚ್ಚರಿಕೆಯನ್ನು ನೀಡುತ್ತೇನೆ ಎಂದರು.