ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 15: ಸೆಗಣಿಯ ಕುರಿತು ಹೆಚ್ಚೆಚ್ಚು ಸಂಶೋಧನೆ ನಡೆಸಬೇಕೆಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ. ದನದ ಹಾಲು, ಸೆಗಣಿ, ಮೂತ್ರದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ನಿರ್ಮಿಸಲು ಸಾಧ್ಯವಿದೆ. ಇದು ಅಂತಿಮವಾಗಿ ದೇಶದ ಅರ್ಥ ವ್ಯವಸ್ಥೆಗೆ ಲಾಭಕರವಾಗಲಿದೆ ಎಂದು ಗಿರಿರಾಜ್ ಸಿಂಗ್ ಹೇಳಿದರು. ಹನ್ನೆರಡು ಉಪಕುಲಪತಿಗಳುಮತ್ತು ಪಶುವೈದ್ಯರಿಗಾಗಿ ಆಯೋಜಿಸಿದ್ದ ಕಮ್ಮಟದಲ್ಲಿ ಅವರು ಮಾತಾಡುತ್ತಿದ್ದರು.
ದನ ಹಾಲು ನೀಡುವುದನ್ನು ನಿಲ್ಲಿಸಿದರೂ ಒಳ್ಳೆಯ ರೀತಿ ಸಾಕಲು ಅಗತ್ಯವಿರುವ ಹಣವನ್ನು ಪಡೆಯಲು ಇದು ರೈತರಿಗೆ ಸಹಾಯಕವಾಗಲಿದೆ ಎಂದು ಸಿಂಗ್ ಹೇಳಿದರು. ಕೃಷಿಯ ವೆಚ್ಚ ಕಡಿಮೆಯಾದರೆ ಗ್ರಾಮಗಳು, ರೈತರು ಪ್ರಗತಿ ಹೊಂದಲಿದ್ದಾರೆ. ರೈತರಿಗೆ ಸೆಗಣಿಯ ಮೂತ್ರದಿಂದ ಹಣ ಸಂಪಾದಿಸಲು ಸಾಧ್ಯವಾದರೆ ಅವರು ಜಾನುವಾರುಗಳನ್ನು ಕೈಬಿಡಲಾರರು. ಬಿಡಾಡಿಯಾಗಿ ತಿರುಗುವ ಜಾನುವಾರುಗಳು ಉತ್ತರಪ್ರದೇಶದ ಮುಖ್ಯ ಸಮಸ್ಯೆಯಾಗಿದೆ. ಮಹಾತ್ಮ ಗಾಂಧಿ, ರಾಮ್ ಮನೋಹರ ಲೋಹಿಯ, ದೀನ್ ದಯಾಲ್ ಉಪಾಧ್ಯಾಯರ ಆಶಯಗಳನ್ನು ಅನುಸರಿಸಿ ತಾನು ಜೀವಿಸುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.