ಮದುವೆ ಪ್ರಯುಕ್ತ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಸಹೋದರ

0
235

ಸನ್ಮಾರ್ಗ ವಾರ್ತೆ

ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಕಟ್, ಅಝಾನ್, ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಇತ್ಯಾದಿಯಾಗಿ ಜಾತಿ -ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸುವ ಕೃತ್ಯಗಳು ನಡೆಯುತ್ತಿರುವುದರ ಮಧ್ಯೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ ಚಂದ್ರಶೇಖರ ಜೆಡ್ಡು ಎಂಬವರು ತನ್ನ ವಿವಾಹದ ಪ್ರಯುಕ್ತ ಮುಸ್ಲಿಮರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಆದರ್ಶ ಮೆರೆದಿದ್ದಾರೆ.

ಬೈರಿಕಟ್ಟೆಗೆಳೆಯರ ಬಳಗದ ಸದಸ್ಯರೂ ಆಗಿರುವ ಚಂದ್ರಶೇಖರ ಜೆಡ್ಡು ಅವರ ವಿವಾಹ ಏಪ್ರಿಲ್ 24ರ ಭಾನುವಾರ ನೆರವೇರಿದೆ. ಆದರೆ ಮದುವೆಗೆ ಆಗಮಿಸಿದ ಮುಸ್ಲಿಮ್ ಗೆಳೆಯರಿಗೆ ರಮಝಾನ್ ಕಾರಣ ಔತಣ ಸ್ವೀಕರಿಸಲು ಸಾಧ್ಯವಾಗದಿರುವುದು ಮದುಮಗ ಚಂದ್ರಶೇಖರರಿಗೆ ಬೇಸರವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಮರಿಗೆ ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಆದರ್ಶ ಮೆರೆದಿದ್ದಾರೆ.

ಇಫ್ತಾರ್ ಕೂಟವನ್ನು ಏರ್ಪಡಿಸಿದ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಸಮಿತಿಯ ಅಧ್ಯಕ್ಷ‌ರು, ಪದಾಧಿಕಾರಿಗಳು, ಮಸೀದಿಯ ಧರ್ಮ ಗುರುಗಳು ಸನ್ಮಾನ ಮಾಡಿದರು.

ಇಫ್ತಾರ್ ಕೂಟಕ್ಕೆ ಆಗಮಿಸಿದ ಊರಿನ ಬಾಂಧವರು ನಮ್ಮೂರ ಸೌಹಾರ್ದ‌ತೆ ಹೀಗೆಯೇ ಮುಂದುವರಿಯಲಿ ಎಂದು ನವ ದಂಪತಿಗೆ ಶುಭ ಹಾರೈಸಿದರು.