ಸನ್ಮಾರ್ಗ ವಾರ್ತೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ವೈದ್ಯರು ಆಗಮಿಸಿ ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಇನ್ಫೆಕ್ಷನ್ನಿಂದಾಗಿ ಅವರ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ. ಇದರಿಂದ ಅವರ ಆಪ್ತ ವೈದ್ಯ ರವಿಕುಮಾರ್ ಅವರು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ, ಈ ಬಗ್ಗೆ ಊಹಾಪೋಹಕ್ಕೆ ಕಿವಿಗೊಡಬೇಡಿ ಎಂದು ತಿಳಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ವೈದ್ಯ ರವಿ ಕುಮಾರ್ ಅವರು, ಸಿದ್ದರಾಮಯ್ಯನವರ ಕೈ ಊತ ಈಗ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು ಕೆಲವು ದಿನಗಳು ಬೇಕಾಗುತ್ತದೆ. ಹಾಗಾಗಿ ಎರಡು ವಾರ ವಿಶ್ರಾಂತಿ ಪಡೆಯಬೇಕು. ಇದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಸಿದ್ದರಾಮಯ್ಯ ಕೊಪ್ಪಳ ಚುನಾವಣಾ ಪ್ರಚಾರದಲ್ಲಿದ್ದಾಗ ನೂಕು-ನುಗ್ಗುಲು ಉಂಟಾಗಿತ್ತು. ಆ ವೇಳೆ ಅವರ ಕೈಗೆ ಗಾಯವಾಗಿತ್ತು. ಕೈ ಗಾಯ ನಡುವೆಯೂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದರು. ಇದೀಗ ಅದರ ಪರಿಣಾಮ ಗೋಚರವಾಗಿದೆ ಎನ್ನಲಾಗಿದೆ.