ಮಾನವತೆಯನ್ನೇ ಬೆತ್ತಲುಗೊಳಿಸಿದಿರಿ

0
286

ಸನ್ಮಾರ್ಗ ವಾರ್ತೆ

✍️ಶಮೀರ ಜಹಾನ್ ಮಂಗಳೂರು

ಇತ್ತೀಚೆಗೆ ಆರ್.ಎಸ್.ಎಸ್ ಹಿರಿಯರೊಬ್ಬರು ವೇದಿಕೆಯ ಮೇಲೆ ನಿಂತು ತುಂಬಿದ ಸಭೆಯಲ್ಲಿ ಮುಸ್ಲಿಮ್ ಮಹಿಳೆಯರ ಬಗ್ಗೆ ಅಶ್ಲೀಲವಾದ ಮಾತುಗಳನ್ನಾಡಿರುವುದು ಕೇವಲ ಮುಸ್ಲಿಮ್ ಮಹಿಳೆಯರಿಗೆ ಮಾತ್ರ ಮಾಡಿದ ಅವಮಾನ ಎಂದು ಯಾರೂ ಕ್ಷುಲ್ಲಕವಾಗಿ ಪರಿಗಣಿಸಬಾರದು.

ಈ ದೇಶದಲ್ಲಿ ನಾಪತ್ತೆಯಾಗಿರುವ ಹೆಣ್ಣು ಮಕ್ಕಳ ಬಗ್ಗೆ ಆಘಾತಕಾರಿ ವರದಿ ಬಂದ ಬಳಿಕವೂ ಈ ರೀತಿ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳು ಹೊರಬರುತ್ತಿದೆ ಎಂದಾದರೆ ಮುಂದಿನ ದಿನಗಳಲ್ಲಿ ಯಾವುದೇ ಧರ್ಮದ ಹೆಣ್ಣು ಮಕ್ಕಳ ಸುರಕ್ಷೆಯ ಬಗ್ಗೆ ಸರಕಾರದಿಂದ ಯಾವ ನಿರೀಕ್ಷೆಯೂ ಬೇಡ.

ಎಲ್ಲ ಕಾಲಗಳಲ್ಲಿ ರಾಜಕೀಯದ ಕಪಟ ನಾಟಕದಲ್ಲಿ ಹೆಣ್ಣೇ ಬಲಿಪಶು. ಬಂಡವಾಳಶಾಹಿ ಮೇಲಧಿಕಾರಿಗಳಿಂದಲೂ ಶೋಷಣೆಗೆ ಒಳಗಾಗುವವಳು ಹೆಣ್ಣೇ. ಪುರೋಹಿತಶಾಹಿ ವ್ಯವಸ್ಥೆಯಲ್ಲಿಯೂ ಬಲಿಪಶು ಹೆಣ್ಣೇ. ಕೋಮು ಗಲಬೆಯಲ್ಲಿ ಬಲಿಪಶು ಹೆಣ್ಣು. ಅದಿರಲಿ, ಮುಸ್ಲಿಮ್ ಹೆಣ್ಣು ಮಕ್ಕಳನ್ನು ತಮಾಷೆಯ ವಸ್ತುವಾಗಿಸಲು, ಈ ರೀತಿ ತುಂಬಿದ ಸಭೆಯಲ್ಲಿ ಸಾರ್ವಜನಿಕವಾಗಿ ಬೆತ್ತಲುಗೊಳಿಸಲು ಕಾರಣವಾದರೂ ಏನು?

ಎಲ್ಲ ಧರ್ಮದಲ್ಲೂ ಹೆಣ್ಣನ್ನು ಗೌರವಿಸಲಾಗಿದೆ. ಅದರಲ್ಲೂ ಹೆಣ್ಣನ್ನು ಪೂಜನೀಯ ಎಂದು ಕರೆಯಲ್ಪಡುವ ಹಿಂದೂ ಧರ್ಮದ ವಾಹಕರೆಂದು ಕರೆಯಲ್ಪಡುವವರೇ ಈ ರೀತಿಯ ಅಶ್ಲೀಲ ಪದಗಳನ್ನು ಬಳಸುವುದಾದರೆ ಹೆಣ್ಣಿನ ಬಗ್ಗೆ ಅವರ ಧೋರಣೆ ಏನು ಎಂಬುದನ್ನು ಸಾಬೀತುಪಡಿಸಿದಂತಾಯಿತಲ್ಲವೇ?

ಯಾವುದೇ ಧರ್ಮದ ಮಹಿಳೆಯಾಗಿರಲಿ ಅವಮಾನಿಸುವುದೆಂದರೆ ತಮ್ಮದೇ ಮಹಿಳೆಯರನ್ನು ಅವಮಾನಿಸಿದಂತೆ ಎಂಬುದು ಹಿಂದುತ್ವದ ಮಾರ್ಗದರ್ಶಕರಿಗೆ ಅನಿಸದಿರುವುದು ಆಶ್ಚರ್ಯವಲ್ಲವೇ?

ಮಹಿಳೆಯರನ್ನು ಅವಮಾನಿಸುವುದೆಂದರೆ ಪರೋಕ್ಷವಾಗಿ ಪುರುಷರನ್ನೇ ಅವಮಾನಿಸಿದಂತೆ. ಆದ್ದರಿಂದ ಹೆಣ್ಣಾಗಿರಲಿ, ಗಂಡಾಗಿರಲಿ ಒಂದು ಧರ್ಮದ ಮಾರ್ಗದರ್ಶಕರು ಎಂದು ಪ್ರಸಿದ್ಧಿ ಪಡೆದವರ ಮಾತುಗಳು ಸಮಾಜಕ್ಕೆ ಕಂಟಕವಾಗಿ ಪರಿಣಮಿಸಬಾರದು. ಸರಕಾರ ತುರ್ತು ಕ್ರಮ ಜರಗಿಸುವ ವರೆಗೆ ಸಾರ್ವಜನಿಕರು ಸುಮ್ಮನಿರಬಾರದು.