ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.30: ಉತ್ತರ ಪ್ರದೇಶದ ಮತಾಂತರ ನಿಷೇಧ ಕಾನೂನನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಬಲಿಸಿದ್ದು, ಮದುವೆಗಾಗಿರುವ ಮತಾಂತರವನ್ನು ಅಂಗೀಕರಿಸುವುದಿಲ್ಲ ಎಂದಿದ್ದಾರೆ.
ಮತಾಂತರ ನಡೆಯುವುದು ಯಾಕೆ ಎಂದು ಕೇಳಲು ಬಯಸುತ್ತೇನೆ. ಸಾಮೂಹಿಕ ಮತಾಂತರ ನಿಲ್ಲಿಸಬೇಕು. ನನ್ನ ತಿಳುವಳಿಕೆಯಂತೆ ಮುಸ್ಲಿಮರಲ್ಲಿರುವ ಒಬ್ಬ ವ್ಯಕ್ತಿ ಇನ್ನೊಂದು ಧರ್ಮದವರನ್ನು ಮದುವೆಯಾಗಲು ಸಾಧ್ಯವಿಲ್ಲ. ಮದುವೆಗಾಗಿ ಮತಾಂತರವನ್ನು ನಾನು ಬಯುಸುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಸಹಜ ಮದುವೆಗೂ ಮತಾಂತರಕ್ಕಾಗಿ ಮದುವೆಯಾಗುವುದಕ್ಕೂ ವ್ಯತ್ಯಾಸ ಇದೆ. ಹೆಚ್ಚಿನ ಪ್ರಕರಣಗಳಲ್ಲಿ ಮತಾಂತರಕ್ಕಾಗಿ ನಡೆದಿರುವ ಮದುವೆಗಳು ಕಾಣ ಸಿಗುತ್ತಿವೆ. ಧರ್ಮ, ಜಾತಿ, ಸಮುದಾಯದ ಹೆಸರಿನಲ್ಲಿ ಒಬ್ಬ ನೈಜ ಹಿಂದೂ ಎಂದೂ ತಾರತಮ್ಯ ತೋರಿಸುವುದಿಲ್ಲ. ಧರ್ಮ ಗ್ರಂಥಗಳು ಅದಕ್ಕೆ ಅನುಮತಿ ನೀಡುವುದಿಲ್ಲ. ವಸುದೇವ ಕುಟುಂಬಕಂ ಎಂಬ ಆಶಯ ನೀಡುವ ಒಂದೇ ಒಂದು ದೇಶ ಭಾರತವಾಗಿದೆ. ಬೇರೆ ಯಾವ ದೇಶವೂ ಹಾಗೆ ಹೇಳುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಉತ್ತರ ಪ್ರದೇಶ ಸರಕಾರ ತಂದಿರುವ ಲವ್ ಜಿಹಾದ್ ಕಾನೂನಿನ ಹೆಸರಿನಲ್ಲಿ ಮುಸ್ಲಿಮ್ ಯುವಕರಿಗೆ ಕಿರುಕುಳ ನೀಡುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.