ಕಲ್ಬುರ್ಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ: ಎರಡು ದಿನಗಳಲ್ಲಿ 13 ರೋಗಿಗಳ ಸಾವು

0
695

ಸನ್ಮಾರ್ಗ ವಾರ್ತೆ

ಕಲ್ಬುರ್ಗಿ:ಕಳೆದ ಎರಡು ದಿನಗಳಿಂದ ಕಲ್ಬುರ್ಗಿಯ ಮೂರು ಆಸ್ಪತ್ರೆಗಳಲ್ಲಿ ಕನಿಷ್ಠ 13 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ಜಿಲ್ಲೆಯ ಆಸ್ಪತ್ರೆಯಲ್ಲಿ ಒಂಬತ್ತು ಸಾವುಗಳು ಸಂಭವಿಸಿದ ಒಂದು ದಿನದ ನಂತರ, ಆಮ್ಲಜನಕದ ಸಿಲಿಂಡರ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣದಿಂದಾಗಿ ಮಂಗಳವಾರ ಮುಂಜಾನೆ ಅಫ್ಜಲ್‌ಪುರ ಪ್ರದೇಶದ ತಾಲೂಕು ಆಸ್ಪತ್ರೆಯಲ್ಲಿ ಇನ್ನೂ ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ.

ಆದಾಗ್ಯೂ, ಚಿಕಿತ್ಸೆಗೆ ಸ್ಪಂದಿಸದೇ ರೋಗಿಗಳು ಸಾವನ್ನಪ್ಪಿದ್ದಾರೆ ಎಂದೂ ಆರೋಗ್ಯ ಇಲಾಖೆಯು ಸರ್ಕಾರಿ ಸೌಲಭ್ಯಕ್ಕೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವುದನ್ನು ಖಚಿತಪಡಿಸಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ಜಿಲ್ಲಾಧಿಕಾರಿ(ಡಿಸಿ) ವಿ ವಿ ಜ್ಯೋಥ್ಸ್ನಾ ಪತ್ರಿಕಾಗೋಷ್ಠಿಯಲ್ಲಿ, ಅಫ್ಜಲ್‌ಪುರ ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಸಿಲಿಂಡರ್‌ಗಳಿವೆ ಮತ್ತು ಯಾವುದೇ ಕೊರತೆಯಿಲ್ಲ ಎಂದು ಹೇಳಿದ್ದಾರೆ. ಸಾವನ್ನಪ್ಪಿದ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳಾ ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದರು.

“ಮೃತಪಟ್ಟ ನಾಲ್ವರಲ್ಲಿ ಇಬ್ಬರು ಕೋವಿಡ್-19 ರೋಗಿಗಳೆಂಬುದನ್ನು ದೃಢಪಡಿಸಿದ್ದು, ಅವರು ಇತರ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ಸಾಕಷ್ಟು ಆಮ್ಲಜನಕ ಸಂಗ್ರಹವಿದೆ. ಆಮ್ಲಜನಕದ ಕೊರತೆ ಇದ್ದರೆ ಆಸ್ಪತ್ರೆಯ ಸಿಬ್ಬಂದಿ ನಮ್ಮನ್ನು ಕರೆಯುತ್ತಿದ್ದರು. ಆದರೆ ಯಾವುದೇ ಕೊರತೆ ಇರಲಿಲ್ಲ” ಅವರು ಹೇಳಿದರು.

ಅಫ್ಜಲ್ಪುರದ ವಕೀಲ ಪ್ರಶಾಂತ್ ಪಾಟೀಲ್, ಅವರ ಕ್ಲೈಂಟ್‌ವೊಬ್ಬರ ಸಹೋದರ ಕೂಡ ಮೃತರಲ್ಲಿ ಒಬ್ಬರಾಗಿದ್ದು, ಡಿಸಿಯವರ ಮಾತುಗಳು ಸತ್ಯದಿಂದ ದೂರವಾಗಿವೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಸಂಜೆಯ ತನಕ ಆಮ್ಲಜನಕವಿತ್ತು. ಆದರೆ, ತಡರಾತ್ರೆಯಲ್ಲಿ ಆಸ್ಪತ್ರೆಯ ಆಮ್ಲಜನಕದ ಸಂಗ್ರಹವು ಖಾಲಿ ಆಯಿತು ಎಂಬುದಾಗಿ ಪಾಟೀಲ್ ಹೇಳಿದರು. ಆಸ್ಪತ್ರೆಯು ಈ ವೇಳೆ ಆಮ್ಲಜನಕದ ಪೂರೈಕೆಯನ್ನು ನಿರೀಕ್ಷಿಸುತ್ತಿತ್ತು ಆದರೆ, ಸೂಕ್ತ ಸಮಯಕ್ಕೆ ಸಿಲಿಂಡರ್‌ಗಳು ಬರಲಿಲ್ಲ. ಎಲ್ಲಾ ನಾಲ್ಕು ರೋಗಿಗಳಿಗೆ ಆಮ್ಲಜನಕದ ಬೆಂಬಲ ಅಗತ್ಯವಾಗಿತ್ತು. ಅವರು ಬೆಳಿಗ್ಗೆ ನಿಧನರಾದರು ಎಂದು ಪಾಟೀಲ್ ಹೇಳಿದರು.

ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಾವುಗಳು ಸಂಭವಿಸಿವೆ ಎಂದು ಅಫ್ಜಲ್ಪುರ ತಾಲ್ಲೂಕು ಆರೋಗ್ಯ ಅಧಿಕಾರಿ ರತ್ನಕರ್ ತೋರಣ್ ಈ ಹಿಂದೆ ಹೇಳಿದ್ದರು. “ನಾನು ತಪ್ಪಾಗಿ ಹೇಳಿಕೆ ನೀಡಿದ್ದೇನೆ. ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದರು ಎಂಬುದು ನಿಜ. ಆದರೆ, ಆಮ್ಲಜನಕದ ಯಾವುದೇ ಕೊರತೆಯಿರಲಿಲ್ಲ” ಎಂದು ತೋರಣ್ ಮಾತು ಬದಲಾಯಿಸಿದರು.

ಆದರೆ, ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ರೋಗಿಯು ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಈ ನಡುವೆ ರಾಜ್ಯದ ಹೊರಗಿನ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸರಬರಾಜು ಮಾಡಿದ್ದಕ್ಕಾಗಿ ಮಂಗಳವಾರ ಬೆಳಿಗ್ಗೆ ಕಲ್ಬುರ್ಗಿ ಜಿಲ್ಲಾ ಪೊಲೀಸರು ವಿಜಯ್ ಆಕ್ಸಿ ಮತ್ತು ಇಂಡಲ್ ಗ್ಯಾಸ‌ಸ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ, ಕಲ್ಬುರ್ಗಿ ಜಿಲ್ಲೆಯಲ್ಲಿ ವೈದ್ಯರ ಪತ್ನಿ ಸೇರಿದಂತೆ ಒಂಬತ್ತು ಮಂದಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಲ್ಬುರ್ಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಐವರು ಸಾವನ್ನಪ್ಪಿದ್ದರೆ, ನಾಲ್ವರು ಅಲಂಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಖಾಸಗಿ ಆಸ್ಪತ್ರೆ ನಿರ್ವಹಣಾಧಿಕಾರಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಮೃತಪಟ್ಟವರಲ್ಲಿ ವೈದ್ಯ ಡಾ ಸಿ.ಎಸ್.ಪಾಟೀಲ್ ಅವರ ಪತ್ನಿ ಅರುಂಧತಿ ಪಾಟೀಲ್(53) ಸೇರಿದ್ದಾರೆ. ಆನಂದ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ತಮ್ಮ ಪತ್ನಿ ಸಾವನ್ನಪ್ಪುತ್ತಿರುವುದನ್ನು ಡಾ ಸಿ.ಎಸ್.ಪಾಟೀಲ್‌ರವರು ತಮ್ಮ ಕಣ್ಣಾರೆ ಕಾಣಬೇಕಾಯ್ತು ಆಸ್ಪತ್ರೆಯ ಮುಖ್ಯಸ್ಥ ಡಾ.ಆನಂದ್ ಪೂಜಾರಿಯವರು “ಆಮ್ಲಜನಕ ಲಭ್ಯವಿಲ್ಲದ ಕಾರಣ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ” ಎಂದು ದೃಢ ಪಡಿಸಿದರು.