ಸನ್ಮಾರ್ಗ ವಾರ್ತೆ-
ಮುಂಬೈ; ನ.11-ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಿಂದ ದೂರು ಉಳಿದ ಬಿಜೆಪಿಗೆ ಸಡ್ಡು ಹೊಡೆಯುವಂತೆ ಶಿವಸೇನೆ ಮತ್ತು ಇತರ ಪಕ್ಷಗಳಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಶಿವಸೇನೆಯನ್ನು ಬೆಂಬಲಿಸಬೇಕಾದರೆ ಮೋದಿ ಸರಕಾರದಲ್ಲಿ ಶಿವಸೇನೆಯ ಏಕೈಕ ಸಚಿವ ಅರವಿಂದ್ ಸಾವಂತ್ ರಾಜೀನಾಮೆ ನೀಡಬೇಕೆಂಬುದು ಶರದ್ ಪವಾರ್ ನೇತೃತ್ವದ ಏನ್ ಸಿ ಪಿ ಪಕ್ಷದ ಬೇಡಿಕೆಯಾಗಿತ್ತು. ಇದೀಗ ಆ ಬೇಡಿಕೆ ಈಡೇರಿದೆ. ಏನ್ ಸಿ ಪಿ ಪಕ್ಷವು ನಿರ್ಣಾಯಕ ಸಭೆ ಸೇರಿದ್ದು, ಶಿವಸೇನೆಯನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ನ ತೀರ್ಮಾನದ ಬಳಿಕ ತನ್ನ ನಿಲುವನ್ನು ಸ್ಪಷ್ಟಪಡಿಸುವುದಾಗಿ ಹೇಳಿದೆ. ಅಲ್ಲದೆ ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಭೆಯೂ ನಡೆಯುತ್ತಲಿದ್ದು, ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ದೆಹಲಿಯಲ್ಲಿ ಸೋನಿಯಾರನ್ನು ಇವತ್ತು ಭೇಟಿಯಾಗಿ ಬೆಂಬಲ ಯಾಚಿಸಲಿದ್ದಾರೆ ಎಂದು ಹೇಳಲಾಗಿದೆ.
ಒಟ್ಟು ಬೆಳವಣಿಗೆಯನ್ನು ನೋಡುವಾಗ ಶಿವಸೇನೆ ನೇತೃತ್ವದ ಸರಕಾರ ರಚನೆಗೆ ಪೂರಕ ವಾತಾವರಣ ಕಂಡು ಬರುತ್ತಿದೆ. ಒಂದು ವೇಳೆ ಕಾನ್ಗ್ರೆಸ್ ಶಿವಸೇನೆಗೆ ಬೆಂಬಲ ನೀಡಿದರೆ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಇದು ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.