ತುಮಕೂರು ವಿಶ್ವವಿದ್ಯಾಲಯದಲ್ಲಿ ‘ಮಾಧ್ಯಮ ಹಬ್ಬ’: ಅಜಿತ್ ಹನುಮಕ್ಕನವರ್ ಅವರನ್ನು ಆಹ್ವಾನಿಸಿರುವುದಕ್ಕೆ ವ್ಯಾಪಕ ವಿರೋಧ

0
189

ಸನ್ಮಾರ್ಗ ವಾರ್ತೆ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬಕ್ಕೆ ಕೋಮುವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಆಹ್ವಾನಿಸಿರುವುದನ್ನು ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ-ಯುವಜನರ ವೇದಿಕೆ ಹಾಗೂ ವಿವಿ ಹಳೆಯ ವಿದ್ಯಾರ್ಥಿಗಳ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತುಮಕೂರು ವಿಶ್ವವಿದ್ಯಾಲಯ ಜಾತ್ಯತೀತ ಪರಂಪರೆಯನ್ನು ಹೊಂದಿದ್ದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇಂತಹ ಮಹತ್ವದ ಪರಂಪರೆಯನ್ನು ಸಾರುತ್ತಿರುವ ವಿಶ್ವವಿದ್ಯಾಲಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ, ವಿಛಿದ್ರಕಾರಿ ಸಂಗತಿಗಳನ್ನು ಪ್ರತಿಪಾದಿಸುವ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಯಾವುದೇ ಕಾರಣಕ್ಕೂ ವಿವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಬೇಡ ಎಂದು ಆಗ್ರಹಿಸಿದರು.

ತುಮಕೂರು ವಿವಿಯಲ್ಲಿ ರಾಜ್ಯಮಟ್ಟದ ಮಾಧ್ಯಮ ಹಬ್ಬ ನಡೆಯುತ್ತಿದೆ. ಇಂತಹ ಹಬ್ಬಕ್ಕೆ ಅಜಿತ್ ಹನುಮಕ್ಕನವರ್ ಅವರಿಂದ ಕೋಮುವಾದಿ ಭಾಷಣ ಮಾಡಿಸಲು ಹೊರಟಿರುವ ವಿವಿಯ ಕ್ರಮ ಪ್ರಶ್ನಾರ್ಹವಾಗಿದೆ. ಅಲ್ಲದೆ ವಿವಿಯ ಪರಂಪರೆಯನ್ನು ನಾಶ ಪಡಿಸುವ ಹುನ್ನಾರ ನಡೆಯುತ್ತಿದೆ. ಶಾಂತಿ-ಸುವ್ಯವಸ್ಥೆಯನ್ನು ಹದಗೆಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ವಿವಿಯ ಕ್ರಮವನ್ನು ಖಂಡಿಸಿ ಮತ್ತು ಇತ್ತೀಚೆಗೆ ಕೋಮುವಾದಿ ಚಟುವಟಿಕೆಗಳು ಹೆಚ್ಚಳವಾಗಿದ್ದು, ಇದನ್ನು ಖಂಡಿಸಿ ಜುಲೈ 20ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಇಂದು ಕುಲಪತಿಗಳು ಮತ್ತು ಕುಲ ಸಚಿವರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಅಜಿತ್ ಹನುಮಕ್ಕನವರ್ ಅವರ ಆಹ್ವಾನಿಸಿರುವುದನ್ನು ಕೈಬಿಡುವಂತೆ ಒತ್ತಾಯಿಸಲಾಯಿತು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯ ಕೊಟ್ಟಶಂಕರ್, ಪ್ರಗತಿಪರ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಗೋಪಿನಾಥ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರುಣ್, ವಕೀಲ ರಂಗಧಾಮಯ್ಯ, ಉಪನ್ಯಾಸಕ ಮೂರ್ತಿ, ವಕೀಲ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ಈ ಶಿವಣ್ಣ, ಹಳೆಯ ವಿದ್ಯಾರ್ಥಿ ಒಕ್ಕೂಟದ ಮುಖಂಡ ಎಚ್.ವಿ.ರಮೇಶ್, ಬಂಡೆಕುಮಾರ, ಮೂರ್ತಿ ಕೆಸ್ತೂರು, ವಾಸುದೇವ್ ಎನ್ ನಾದೂರ್, ಛಲವಾದಿ ಮಹಾಸಭಾದ ಶೇಖರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಉಪಸ್ಥಿತರಿದ್ದರು.