ಕೆ.ಸಿ.ರೋಡ್: ರಾತ್ರಿ ಮನೆಯಿಂದ ಹೊರಹೋಗಿದ್ದ ಬಾಲಕ ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

0
25100

ಸನ್ಮಾರ್ಗ ವಾರ್ತೆ

ಮಂಗಳೂರು: ರಾತ್ರಿ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಹೋಗಿದ್ದ ಬಾಲಕನೋರ್ವ ಬಳಿಕ ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರು ನಗರದ ತಲಪಾಡಿ ಸಮೀಪವಿರುವ ಕೆ‌.ಸಿ‌. ರೋಡ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತಪಟ್ಟಿರುವ ಬಾಲಕನನ್ನು ಕೆ.ಸಿ. ರೋಡ್ ಸಮೀಪದ ನಿವಾಸಿ ಹನೀಫ್ ಎಂಬವರ ಪುತ್ರ ಎಂಬ ಆಕಿಫ್(12) ಎಂದು ಗುರುತಿಸಲಾಗಿದೆ.

ಬಾಲಕ ಶನಿವಾರ ರಾತ್ರಿ 9 ರ ಸುಮಾರಿಗೆ ತಾಯಿಯ ಬಳಿ ಜ್ಯೂಸ್ ಕುಡಿದು ಬರುತ್ತೇನೆಂದು ಮನೆಯಿಂದ ಹೊರ ಹೋಗಿದ್ದನು‌. ಆ ಬಳಿಕ ಮನೆಗೆ ಹಿಂದಿರುಗದ ಕಾರಣ ಗಾಬರಿಗೊಂಡ ಪೋಷಕರು, ಸ್ಥಳೀಯವಾಗಿ ವಿಚಾರಿಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಕೆ.ಸಿ.ರೋಡ್ ಫಲಾಹ್ ಶಾಲೆಯ ಬಳಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಎನ್. ಶಶಿಕುಮಾರ್, ಪೋಷಕರಿಗೆ ಸಾಂತ್ವನ ನೀಡಿ‌ದ್ದು, ನಮ್ಮ ಮನೆಯ ಮಗನಂತೆ ಈ ಪ್ರಕರಣವನ್ನು ಕೈಗೆತ್ತಿಕೊಂಡು ಘಟನೆಯ ಇಂಚಿಂಚೂ ಮಾಹಿತಿ ಪಡೆಯಲಾಗುವುದು‌. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಲು ತನ್ನಿಂದಾದ ಪ್ರಯತ್ನ ಮಾಡುತ್ತೇನೆ
ಎಂದು ಭರವಸೆ ನೀಡಿದ್ದಾರೆ.

ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಓರ್ವನ ಬಂಧನ: ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಮೊಬೈಲ್ ಕೊನೆಯ ಕರೆಯ ಆಧಾರದಲ್ಲಿ ಸ್ಥಳೀಯವಾಗಿ ವಾಸಿಸುತ್ತಿರುವ ಯುವಕನೋರ್ವನನ್ನು ಪೊಲೀಸರು ತನಿಖೆ ನಡೆಸಲು ಬಂಧಿಸಿರುವುದಾಗಿ ತಿಳಿದುಬಂದಿದೆ.

ಆನ್ ಲೈನ್ ಗೇಮ್ ನಲ್ಲಿ ಸೋತ ವಿಚಾರವಾಗಿ ನಡೆದ ಪೋನ್ ಕರೆಯ ಬಳಿಕ ಮನೆಯಿಂದ ಹೊರಗೆ ಹೋಗಿದ್ದನೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಬಾಲಕ ಮನೆಯ ಸಮೀಪ ವೇಗವಾಗಿ ಸಮೀಪ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ವರದಿಯಾಗಿದೆ. ಪೊಲೀಸರ ಸಂಪೂರ್ಣ ತನಿಖೆಯ ಬಳಿಕವೇ ಘಟನೆಯ ಸತ್ಯಾಂಶ ತಿಳಿದು ಬರಬೇಕಿದೆ.