ಸನ್ಮಾರ್ಗ ವಾರ್ತೆ
ಸುರ್ಗುಜ,ಆ.2: ಆಂಬುಲೆನ್ಸ್ ಬರಲು ರಸ್ತೆಯಿಲ್ಲದ್ದರಿಂದ ಛತ್ತೀಸ್ಗಢದಲ್ಲಿ ಗರ್ಭಿಣಿ ಮಹಿಳೆಯನ್ನು ಬುಟ್ಟಿಯಲ್ಲಿಟ್ಟು ಹೆಗಲಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದಿರುವ ಘಟನೆ ಸುರ್ಗುಜಕಂಡಿ ಗ್ರಾಮದಲ್ಲಿ ನಡೆದಿದೆ. ಹಲವು ಕುಟುಂಬಗಳು ಇಲ್ಲಿದ್ದರೂ ಈವರೆಗೂ ಇಲ್ಲಿಗೆ ರಸ್ತೆ ಆಗಿಲ್ಲ. ಛತ್ತೀಸ್ಗಡದಲ್ಲಿ ಈಗ ಭಾರೀ ಮಳೆ ಸುರಿಯುತ್ತಿದ್ದು, ನೆರೆ ಭೀತಿ ಎದುರಾಗಿದೆ, ಭೂ ಕುಸಿತದ ಬೆದರಿಕೆಯೂ ಇದೆ. ಇಂತಹ ಸಂದರ್ಭದಲ್ಲಿ ಮಹಿಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಸರಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ನಂತರ ಗರ್ಭಿಣಿ ಮಹಿಳೆಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ಕೋಲೊಂದಕ್ಕೆ ಕಟ್ಟಿ ಇಬ್ಬರು ಹೆಗಲಲ್ಲಿರಿಸಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಭಾರೀ ಮಳೆ ಸುರಿಯುವುದರಿಂದ ಹೆಚ್ಚಿನ ಗ್ರಾಮದ ನಿವಾಸಿಗಳು ತುಂಬ ಬವಣೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಝಾ ಹೇಳಿದರು. ಇಂತಹ ಪ್ರದೇಶಗಳಿಗೆ ತುರ್ತು ಅಗತ್ಯಕ್ಕಾಗಿ ಸಣ್ಣ ಕಾರುಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.