ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋ: ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎಂದ ಸಚಿವ ಕೃಷ್ಣ ಬೈರೇಗೌಡ

0
366

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣವು ಇಡೀ ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಅತಿದೊಡ್ಡ ಅತ್ಯಾಚಾರ ಪ್ರಕರಣ ಇದು, ಇಷ್ಟು ದಿನ ಇವರ ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಇವರ ತಂದೆ, ತಾಯಿ ಏನು ಮಾಡುತ್ತಿದ್ದರು? ಓಟ್ ಹಾಕಿದ ಜನರಿಗೆ ಮಾಡಿದ ದೊಡ್ಡ ದ್ರೊಹ ಇದು, ರಾಜ್ಯದ ಜನರಿಗೆ ಉತ್ತರ ಕೊಡಿ ಎಂದು ಕೃಷ್ಣಭೈರೇಗೌಡ ಒತ್ತಾಯಿಸಿದ್ದಾರೆ.

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಮಾದ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಈ ಪ್ರಕರಣ ಮೇಲ್ನೋಟಕ್ಕೆ ಪ್ರಜ್ವಲ್​ ರೇವಣ್ಣ ಅವರದ್ದೇ ಎಂದು ತಿಳಿದು ಬರುತ್ತಿದ್ದು ತನಿಖೆ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಈಗಾಗಲೇ ನಮ್ಮ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಎಸ್​ಐಟಿ ತನಿಖೆ ನಡೆಸಲು ತೀರ್ಮಾನಿಸಿದ್ದು ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ರಾಜ್ಯದ ಜನರು ಅವರ ತಾತನನ್ನು ಆಶೀರ್ವದಿಸಿ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ, ಅವರ ಚಿಕ್ಕಪ್ಪ ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ, ಅವರ ತಂದೆ ರೇವಣ್ಣಗೆ ಅದೆಷ್ಟು ಬಾರಿ ಮಂತ್ರಿಯಾಗಿದ್ದಾರೆ ಎಲ್ಲಾ ಅಧಿಕಾರಗಳನ್ನು ಅನುಭವಿಸಿದ್ದಾರೆ, ಇಷ್ಟೆಲ್ಲಾ ಆಗಿ, ಯಾವ ಜನ ಇವರಿಗೆ ಓಟ್ ಹಾಕಿ ಸಾಕಿದ್ದಾರೆ, ಅನ್ನ ಹಾಕಿದ ಮನೆಗೆ ಇವತ್ತು ಖನ್ನಾ ಹಾಕಿ ತಮ್ಮ ಮನೆಯಲ್ಲೇ ಮಹಿಳೆಯರ ದುರ್ಬಳಕೆ ಮಾಡಿಕೊಂಡು ದೇಶದ ಅತಿ ದೊಡ್ಡ ಲೈಂಗಿಕ ಹಗರಣ ರೀತಿ ಕಾಣುತ್ತಿದೆ ಎಂದರು.

ಇಷ್ಟು ದಿನ ಇವರ ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಇವರ ತಂದೆ ರೇವಣ್ಣ, ತಾಯಿ ಭವಾನಿ ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಣ ಕುರುಡುತನ ಅನುಸರಿಸುತ್ತಿದ್ದರಾ? ಅಮಾಯಕ ಹೆಣ್ಣು ಮಕ್ಕಳ ಬಡತನವನ್ನ, ಕಷ್ಟತನವನ್ನ ಲಾಭ ಮಾಡಿಕೊಂಡು ದೌರ್ಜನ್ಯ ನಡೆಸುತ್ತಿದ್ದೀರಿ, ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರು ಮಗನಿಗೆ ಬೆಂಬಲ ನೀಡುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದೀರಿ ಇದಕ್ಕೆಲ್ಲಾ ರಾಜ್ಯದ ಜನಕ್ಕೆ ನೀವು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರು ಚುನಾವಣೆ ಬಂದರೆ ಧರ್ಮ ಎಂದು ಮಾತನಾಡುತ್ತಾರೆ, ಇವತ್ತು ಇತಿಹಾಸದಲ್ಲೇ ಅತಿ ದೊಡ್ಡ ಅಧರ್ಮದ ಕೆಲಸ ನಡೆದಿದೆ, ದ್ರೌಪದಿಗೆ ವಸ್ತ್ರಾಪಹರಣ ಮಾಡಿದ ಹಾಗೆ ಇವತ್ತು ಹಾಸನ ಜಿಲ್ಲೆಯ ಸುಮಾರು ಮಹಿಳೆಯರ ವಸ್ತ್ರಾಪಹರಣದ ಕೆಲಸ ನಡೆದಿದೆ. ರಾಮನ ಬಗ್ಗೆ ಕೃಷ್ಣನ ಬಗ್ಗೆ ಮಾತನಾಡುವ ನೀವು ರಾಮಾಯಣ, ಮಹಾಭಾರತವನ್ನು ಓಟ್​ಗೆ ಬಳಸಿಕೊಳ್ಳುವ ನಿರ್ಲಜ್ಜ ಬಿಜೆಪಿಯವರು ಇವತ್ತು ಇಂತಹ ಲೈಂಗಿಕ ಹಗರಣ ಕುಟುಂಬದ ಜೊತೆಗೆ  ಸಂಸಾರ ನಡೆಸಿ, ಒಬ್ಬರಿಗೆ ಒಬ್ಬರು ಆಲಿಂಗನ ಮಾಡ್ಕೊಂಡು ಈ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದೀರಿ. ಇದು ನಾಚಿಕೆಗೇಡು.

ಇತ್ತೀಚೆಗೆ ತಾಳಿ ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿರುವ ಪ್ರಧಾನಿ ಮೋದಿಯವರು ಇಂದು ದೇವೇಗೌಡರ ಮೊಮ್ಮಗನೆ ಅದೆಷ್ಟು ಹೆಣ್ಣು ಮಕ್ಕಳ ತಾಳಿಯನ್ನು ಕಸಿದುಕೊಳ್ಳುವ ಕೆಲಸ ಮಾಡಿದ್ದಾನೆ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದರು.  ಈ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಮಾತನಾಡದೇ ಈ ಹಗರಣದಲ್ಲಿ ಅವರು ಭಾಗಿಯಾಗಿ ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು.

ನಿಮ್ಮ ಮನೆಯ ಮಗ, ಮಹಿಳೆಯರ ಅತ್ಯಾಚಾರ ಮಾಡಿಕೊಂಡು ಬಂದರೂ ಕೂಡ ದೇಶದ ಮಾಜಿ ಪ್ರಧಾನಿ ದೇವೇಗೌಡ ಅವರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಇವತ್ತಿಗೂ ಕೂಡ ಈ ಪ್ರಕರಣದ ಬಗ್ಗೆ ಮಾತನಾಡದೇ ಸಮರ್ಥನೆ ಮಾಡಿಕೊಂಡು ಬರುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದವರು ಹೇಳಿದರು.

LEAVE A REPLY

Please enter your comment!
Please enter your name here