ಜೆಡಿಎಸ್ ಸೆಕ್ಯೂಲರ್ ಪದ ತೆಗೆಯುವುದು ಸೂಕ್ತ -ಜಮೀರ್ ಅಹಮದ್; ಬಿಜೆಪಿ ಒನ್ ಡಿಜಿಟ್ ಗೆ ಇಳಿಯಲಿದೆ ಎಂದು ವ್ಯಂಗ್ಯ

0
205

ಬೆಂಗಳೂರು : ಬಿಜೆಪಿ -ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದ್ದು, ಇದೀಗ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂಬುದು ಸಾಬೀತಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಜೆಡಿಎಸ್ ಇನ್ಮುಂದೆ ಜಾತ್ಯತೀತ ಪದ ತೆಗೆಯುವುದು ಸೂಕ್ತ ಎಂದು ಹೇಳಿದರು.

2019 ರಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ನಾವು ಪ್ರತ್ಯೇಕವಾಗಿ ಹೋಗಿದ್ದರೆ ಕನಿಷ್ಠ ಹತ್ತು ಸ್ಥಾನ ಗೆಲ್ಲುತ್ತಿದ್ದೆವು. ಜೆಡಿಎಸ್ ಜತೆ ಹೋಗಿದ್ದಕ್ಕೆ ಒನ್ ಡಿಜಿಟ್ ಗೆ ಇಳಿದೆವು. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಥಿತಿಯೂ ಇದೇ ಆಗಲಿದೆ ಎಂದು ವ್ಯಂಗ್ಯವಾಡಿದರು.

ಮೈತ್ರಿ ಮಾತುಕತೆ ಗೆ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಕರೆದಿಲ್ಲ. ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂದು ಕರೆದಿಲ್ಲವೇ ಎಂದು ಕೇಳಿದ್ದಾರೆ.

ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಏನು ಹೇಳುತ್ತಾರೆ. ಮೈತ್ರಿ ಬಗ್ಗೆ ಅವರು ಮೌನ ವಹಿಸಿರುವುದು ಯಾಕೆ ಎಂದು ಕೇಳಿದ್ದಾರೆ.

ಜೆಡಿಎಸ್ -ಬಿಜೆಪಿ ಮೈತ್ರಿ ಯಿಂದ ಇದೀಗ ಕಾಂಗ್ರೆಸ್ ಪಕ್ಷ ಒಂದೇ ಜಾತ್ಯತೀತ ಎಂಬುದು ಸಾಬೀತಾಗಿದೆ. ಯಾವುದೇ ಸಿದ್ಧಾಂತ ಇಲ್ಲದ ಮೈತ್ರಿ ಎಂಬುದು ರಾಜ್ಯದ ಜನತೆಗೂ ಸ್ಪಷ್ಟ ತೆ ಸಿಕ್ಕಿದೆ. ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭ ಆಗಲಿದೆ ಎಂದು ತಿಳಿಸಿದ್ದಾರೆ.