KSL ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿನ ಗೊಂದಲ ಬಗೆಹರಿಸಿರಿ: ಶಾಸಕ ರಘುಪತಿ ಭಟ್ ‌ಗೆ‌ ಎಸ್‌ಐಓ ಉಡುಪಿ ವತಿ‌ಯಿಂದ ಮನವಿ ಸಲ್ಲಿಕೆ

0
348

ಸನ್ಮಾರ್ಗ ವಾರ್ತೆ

ಉಡುಪಿ: ಕಾನೂನು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಗೊಂದಲ ಬಗೆಹರಿಸುವ ಕುರಿತು ಸದನದಲ್ಲಿ ಸೂಕ್ತ ಚರ್ಚೆ ನಡೆಸುವಂತೆ ಕೋರಿ ಸ್ಕೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಉಡುಪಿ ಜಿಲ್ಲೆಯ ಕಾರ್ಯಕರ್ತರು ಶಾಸಕ ರಘುಪತಿ ಭಟ್’ಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಪರೀಕ್ಷಾ ವಿಷಯವಾಗಿ ವಿಶ್ವವಿದ್ಯಾಲಯದ ವಿರೋಧದಲ್ಲಿ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವ್ಯಾವಹಾರಿಕ ನಡವಳಿಕೆ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯು ಕಳೆದ ಎರಡು ವರ್ಷಗಳ ಶೈಕ್ಷಣಿಕ ವರ್ಷದ ಪರೀಕ್ಷೆಯನ್ನು ಸಾಧ್ಯವಾದಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವ ತೀರ್ಮಾನ ಕೈಗೊಂಡಿತ್ತು ಅದರ ಭಾಗವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (B.C.I)ವು ಕಾನೂನು ವಿದ್ಯಾರ್ಥಿಗಳ ಪರೀಕ್ಷೆಯನ್ನು ತೆಗೆದುಕೊಳ್ಳಲು ನಾಲ್ಕು ವಿಧದ ಮಾದರಿಯನ್ನು ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು, ಆದರೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಈ ಶಿಫಾರಸನ್ನು ಪರಿಗಣನೆಗೆ ತೆಗೆದುಕೊಳ್ಳದೇ ದೈಹಿಕ ಪರೀಕ್ಷೆಯನ್ನು ನಡೆಸುವುದಾಗಿ ಸುತ್ತೋಲೆ ಹೊರಡಿಸಿತ್ತು, ವಿಶ್ವವಿದ್ಯಾಲಯದ ಈ ನಡೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

ಕಾನೂನು ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಪಡೆದಿದ್ದು ಬೋಧನಾ ತರಗತಿಗಳು ಇನ್ನೂ ಪ್ರಾರಂಭವಾಗಿಲ್ಲ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷ ತುಂಬಾ ವಿಳಂಬವಾಗಿದೆ ಎಂದು ಆರೋಪಿಸುತ್ತಿದ್ದು ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದರು ಸಹ ವಿಶ್ವವಿದ್ಯಾಲಯವು ಇದುವರೆಗೂ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದೆ ತಮ್ಮದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

ಅದರಿಂದ ಶಾಸಕರು ಈ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂಬರುವ ಸದನದ ಅಧಿವೇಶನದಲ್ಲಿ ಚರ್ಚ್‌ಗೆ ಒಳಪಡಿಸಬೇಕು ಮತ್ತು ಆದಷ್ಟು ಶೀಘ್ರದಲ್ಲಿ ಕಾನೂನು ಮಂತ್ರಿಗಳೊಂದಿಗೆ ಈ ವಿಷಯದಲ್ಲಿ ಮಾತನಾಡ ಬೇಕೆಂದು ಈ ಮೂಲಕ SIO ಉಡುಪಿ ಜಿಲ್ಲೆ ಮನವಿಯಲ್ಲಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್.ಐ.ಓ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಫೀದ್ ಉಮರ್, ಅಯಾನ್ ಮಲ್ಪೆ, ರಿಝಾನ್ ಮಲ್ಪೆ, ವಸೀಮ್ ಹೂಡೆ, ಸಲ್ಮಾನ್ ಹೂಡೆ ಉಪಸ್ಥಿತರಿದ್ದರು.