ಮೋದಿ ಸರಕಾರ ಆಡಳಿತದ ಎಲ್ಲ ರಂಗಗಳಲ್ಲಿ ವಿಫಲ: ಮತ್ತೊಮ್ಮೆ ಬಿಜೆಪಿ ವಿರುದ್ಧ ಧ್ವನಿ ಎತ್ತಿದ ಸುಬ್ರಮಣಿಯನ್ ಸ್ವಾಮಿ

0
241

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಸತತ ಟೀಕೆಗೊಳಪಡಿಸುತ್ತಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

ಕೇಂದ್ರ ಸರ್ಕಾರ ತನ್ನ ಆಡಳಿತದ ಪ್ರತಿಯೊಂದು ವಿಭಾಗದಲ್ಲಿಯೂ ವಿಫಲವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆರ್ಥಿಕತೆ,  ಗಡಿ ಭದ್ರತೆ,  ವಿದೇಶಿ ನೀತಿ, ರಾಷ್ಟ್ರೀಯ ಭದ್ರತೆ ಸೇರಿದಂತೆ ಪ್ರತಿಯೊಂದರಲ್ಲೂ ಮೋದಿ ಸರ್ಕಾರದ ವಿಫಲತೆ ಎದ್ದು ಕಾಣುತ್ತಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಮೋದಿ ಸರಕಾರದ ಫಲಿತಾಂಶ ಪತ್ರ: ಆರ್ಥಿಕತೆ-ಫೇಲ್​, ಗಡಿ ಭದ್ರತೆ-ಫೇಲ್​, ವಿದೇಶಾಂಗ ನೀತಿ-ಅಫ್ಘಾನಿಸ್ತಾನ ಬಿಕ್ಕಟ್ಟು ನಿರ್ವಹಣೆ ವೈಫಲ್ಯ, ರಾಷ್ಟ್ರೀಯ ಭದ್ರತೆ-ಪೆಗಾಸಸ್​ ಎನ್​ಎಸ್ಒ, ಅಂತಾರಾಷ್ಟ್ರೀಯ ಭದ್ರತೆ-ಕಾಶ್ಮೀರದ ಕರಾಳತೆ ಕಾರಣ ಯಾರು?-” ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ನಿನ್ನೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಸ್ಪರ ಭೇಟಿಯ ಬೆನ್ನಲ್ಲೇ ಸ್ವಾಮಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂಬ ವದಂತಿಯು ಬಲವಾಗಿ ಕೇಳಿ ಬರುತ್ತಿದೆ. ನಿನ್ನೆ ಪತ್ರಕರ್ತರು ಟಿಎಂಸಿ ಸೇರ್ಪಡೆಗೊಳ್ಳುತ್ತಿರೋ ಎಂದು ಪ್ರಶ್ನಿಸಿದಾಗ ತಾನು ಮೊದಲಿನಿಂದಲೇ ಅವರೊಂದಿಗೆ ಇದ್ದೇನೆ ಪಕ್ಷವನ್ನು ಸೇರಬೇಕಾದ ಅವಶ್ಯಕತೆ ಇಲ್ಲ ಎಂದು ಸ್ವಾಮಿ ಪ್ರತಿಕ್ರಿಯಿಸಿದ್ದರು.