ಸನ್ಮಾರ್ಗ ವಾರ್ತೆ
ಲಕ್ನೊ: ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇಬ್ಬರ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ಲಕ್ನೊದ ವಿಶೇಷ ಕೋರ್ಟು ಬುಧವಾರ ತೀರ್ಪು ನೀಡಿದೆ. ಪ್ರಕರಣದಲ್ಲಿ ಇತರ ನಾಲ್ಕು ಮಂದಿ ಆರೋಪಿಗಳನ್ನು ಕೋರ್ಟು ಖುಲಾಸೆಗೊಳಿಸಿದೆ. ನವೆಂಬರ್ ಹನ್ನೆರಡಕ್ಕೆ ಶಿಕ್ಷೆಯ ಪ್ರಮಾಣವನ್ನು ತಿಳಿಸುವುದಾಗಿ ಕೋರ್ಟು ಹೇಳಿದೆ.
ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಇಬ್ಬರು ಸಾಕ್ಷಿಗಳು ಪ್ರಕರಣದಲ್ಲಿ ಪಕ್ಷ ಬದಲಿಸಿದ್ದು ಯಾಕೆ ಎಂದು ತನಿಖೆ ನಡೆಸಲು ಕೋರ್ಟು ಸೂಚಿಸಿತು. ಪ್ರಜಾಪತಿ ಸಮಾಜವಾದಿ ಪಾರ್ಟಿ ಸಚಿವರಾಗಿದ್ದರು. 2017ರಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಅವರ ವಿರುದ್ಧ ದಾಖಲಾಗಿತ್ತು. ಎಸ್ಪಿ ಉನ್ನತ ರಾಜಕಾರಣಿಗಳು ಎರಡು ಬಾರಿ ತನ್ನನ್ನು ಅತ್ಯಾಚಾರ ಮಾಡಿದರೆಂದು ಮತ್ತು ತನ್ನ ಅಪ್ರಾಪ್ತ ವಯಸ್ಸಿನ ಮಗಳಿಗೂ ಕಿರುಕುಳ ನೀಡಲು ಯತ್ನಿಸಿದರು ಎಂದು ಅತ್ಯಾಚಾರ ಸಂತ್ರಸ್ತೆ ದೂರು ನೀಡಿದ್ದರು.
ಆಶಿಷ್ ಶುಕ್ಲ, ಅಶೋಕ್ ತಿವಾರಿ ಪ್ರಜಾಪತಿಜೊತೆ ಆರೋಪ ಸಾಬೀತಾದವರು. ಶುಕ್ಲ ಅಮೇಠಿಯಲ್ಲಿ ರೆವೆನ್ಯೂ ಕ್ಲರ್ಕ್ ಆಗಿದ್ದು, ತಿವಾರಿ ಗುತ್ತೆ ನೌಕರನಾಗಿದ್ದ.