ಟರ್ಕಿ, ಜೂ.19: ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ಸಾವು ಸಹಜವಾಗಿ ನಡೆದಿದೆ ಎಂಬ ನಂಬಿಕೆಯನ್ನು ತಾನು ಹೊಂದಿಲ್ಲ ಎಂದು ಟರ್ಕಿಯ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳಿದರು. ಟರ್ಕಿಯಲ್ಲಿ ನಡೆದ ಮುರ್ಸಿ ಸಂತಾಪ ಸೂಚಕ ಪ್ರಾರ್ಥನಾ ಸಂಗಮದಲ್ಲಿ ಅವರು ಮಾತಾಡುತ್ತಿದ್ದರು.
ಟರ್ಕಿಯ 80ಕ್ಕೂ ಹೆಚ್ಚು ನಗರಗಳಲ್ಲಿ ಮುರ್ಸಿಗಾಗಿ ಸಂತಾಪ ಸೂಚಕ ಸಭೆಗಳು ನಡೆದಿವೆ. ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗ ಕೂಡ ಆಗ್ರಹಿಸಿದೆ. ಕಳೆದ ಆರು ವರ್ಷಗಳಲ್ಲಿ ಕಸ್ಟಡಿಯಲ್ಲಿದ್ದ ಮುರ್ಸಿಯ ಜೀವನ ತನಿಖೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆಯೋಗ ತಿಳಿಸಿದೆ.
ಕತರ್ ಅಮೀರ್ ಶೇಖ್ ತಮೀನ್ ಬಿನ್ ಹಮದ್ ಅಲ್ಥಾನಿ, ಮಲೇಶ್ಯದ ವಿದೇಶ ಸಚಿವ ಸೈಫದ್ದೀನ್ ಅಬ್ದುಲ್ಲ ಮೊದಲಾದ ನಾಯಕರು ಮುರ್ಸಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟುನೀಷ್ಯದ ಅನ್ನಹ್ದಾ ಪಾರ್ಟಿ, ಜೋರ್ಡಾನಿನ ಮುಸ್ಲಿಮ್ ಬ್ರದರ್ ಹುಡ್ ಮುರ್ಸಿಯವರ ನಿಧನಕ್ಕೆ ಸಂತಾಪ ಸೂಚಿಸಿದೆ. ಆಮ್ನೆಸ್ಟಿ ಇಂಟರ್ನ್ಯಾಶನಲ್ ಮುರ್ಸಿ ಕುಟುಂಬಕ್ಕೆ ಸಂತಾಪ ಸೂಚಿಸಿದೆ. 2012 ಜೂನ್ನಲ್ಲಿ ಈಜಿಪ್ಟ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದಿದ್ದ ಮುರ್ಸಿಯವರನ್ನು ಸೈನಿಕ ಬುಡಮೇಲು ಕೃತ್ಯದ ಮೂಲಕ 2013 ಜುಲೈಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಮುಹಮ್ಮದ್ ಮುರ್ಸಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಮೊದಲ ಈಜಿಪ್ಟ್ ಅಧ್ಯಕ್ಷರಾಗಿದ್ದಾರೆ.