ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಿರತ ರೈತರ ಕುರಿತು ಕಾಳಜಿವಹಿಸದ ಕೇಂದ್ರ ಸರಕಾರದ ವ್ಯವಹಾರವನ್ನು ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಕಟುವಾಗಿ ಟೀಕಿಸಿದ್ದು ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ, ಉತ್ತರಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ನಷ್ಟ ತಂದೊಡ್ಡಲಿದೆ ಎಂದು ಹೇಳಿದರು.
ಒಂದು ನಾಯಿ ಸತ್ತರೆ ಶೋಕ ವ್ಯಕ್ತಪಡಿಸುತ್ತಾರೆ. 250 ರೈತರು ಇಲ್ಲಿ ಮೃತಪಟ್ಟರು. ಒಬ್ಬನೂ ಶೋಕ ವ್ಯಕ್ತಪಡಿಸಿಲ್ಲ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಹೇಳಿದರು. ಈ ಹೋರಾಟ ದೀರ್ಘಕಾಲ ಮುಂದುವರಿದರೆ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ನಷ್ಟ ಆಗಲಿದೆ. ರೈತರ ಹೋರಾಟಕ್ಕೆ ಸಂಬಂಧಿಸಿದ ವಿಷಯದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರೊಂದಿಗೆ ಮಾತಾಡಿದ್ದೇನೆ. ರೈತರನ್ನು ಬರಿಗೈಯಲ್ಲಿ ಹಿಂದೆ ಕಳುಹಿಸಬಾರದು. ಕೇಂದ್ರ ಕೂಡಲೇ ರೈತರೊಂದಿಗೆ ಬಹಿರಂಗ ಚರ್ಚೆಗೆ ತಯಾರಾಗಬೇಕು ಎಂದು ಇಬ್ಬರನ್ನೂ ಕೇಳಿಕೊಂಡೆ ಎಂದು ಮಲಿಕ್ ಹೇಳಿದ್ದಾರೆ.
ಸತ್ಯಪಾಲ ಮಲಿಕ್ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದರು ಅವರನ್ನು 2019 ನವೆಂಬರಿನಲ್ಲಿ ಗೋವಾದ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಇಬ್ಭಾಗ ಮಾಡುವುದರೊಂದಿಗೆ ಮಾಲಿಕ್ರನ್ನು ಗೋವಾಕ್ಕೆ ವರ್ಗಾವಣೆ ಮಾಡಲಾಗಿತ್ತು. ನಂತರ ಮೇಘಾಲಯದ ರಾಜ್ಯಪಾಲರನ್ನಾಗಿ ಮಾಡಲಾಯಿತು.