ಕಾರು ಖರೀದಿಗಾಗಿ ಶಾಸಕರ ಆದಾಯ ಮಿತಿ ಏರಿಸುವಾಗ, ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ ಹೇರಿಕೆ ಏಕೆ: ಸರ್ಕಾರವನ್ನು ಖಂಡಿಸಿದ ವೆಲ್ಫೇರ್ ಪಾರ್ಟಿ

0
827

ಸನ್ಮಾರ್ಗ ವಾರ್ತೆ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನಕ್ಕೆ ₹2.5 ಲಕ್ಷದ ಆದಾಯ ಮಿತಿ ಹಾಕಿರುವುದನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್‌ರವರು, ಆದಾಯ ಮಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಕರ್ಯಗಳಿಂದ ವಂಚಿತರಾಗಲಿದ್ದಾರೆ. ಸಾಮಾಜಿಕ, ಆರ್ಥಿಕ ಹಿಂದುಳಿಯುವಿಕೆ ಹಾಗೂ ಜೀವನ ನಿರ್ವವಣೆ ವೆಚ್ಚವನ್ನು ವಿದ್ಯಾರ್ಥಿ ವೇತನಕದ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಫೆಲೋಶಿಪ್ ಹಣದಲ್ಲಿ ಶೇ‌. 70ರಷ್ಟು ಕಡಿತ ಮಾಡಿದ ಬೆನ್ನಲ್ಲೇ, ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ ಹಾಕಲಾಗಿದೆ.ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೊರೋನ ಅಬ್ಬರಕ್ಕೆ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು ಇದುವರೆಗೂ ಸರಕಾರ ಸರಿಯಾದ ರೀತಿಯಲ್ಲಿ ಜನರಿಗೆ ಸಹಾಯ ಮಾಡಿಲ್ಲ. ಇಂತಹ ಸಂಧರ್ಭದಲ್ಲಿ ಸರಕಾರ ಶಾಸಕರಿಗೆ, ಸಂಸದರಿಗೆ ಕಾರು ಖರೀದಿಗೋಸ್ಕರ ಅನಿವಾರ್ಯವಲ್ಲದ ವಿಶೇಷ ಸವಲತ್ತಿಗಾಗಿ 1ಲಕ್ಷ ರೂ ಏರಿಕೆ ಮಾಡಿದ್ದು ದುರದುಷ್ಟಕರ ಸಂಗತಿ. 28 ಸಂಸದರು, 32 ಸಚಿವರನ್ನೊಳಗೊಂಡ ಒಟ್ಟು 60 ಕಾರುಗಳ ಖರೀದಿಗೆ 13 ಕೋಟಿ 80ಲಕ್ಷ ರೂ. ಮೊತ್ತವಾಗಿದೆ.

ಏಕೆಂದರೆ ಒಂದು ವರ್ಷದಿಂದ ಸಾರಿಗೆ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಬಿಸಿ ಊಟ ತಯಾರಿಸುವ ತಾಯಂದಿರಿಗೆ ಜನಸಾಮಾನ್ಯರಿಗೆ ಇನ್ನೂ ಹಲವಾರು ಸರಕಾರದಿಂದ ಬರಬೇಕಾದ ಹಣವನ್ನು ಸರಕಾರ ನೀಡದೇ ಜನರ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿ ತಮ್ಮ ಹೆಚ್ಚಿನ ಅನೂಕೂಲತೆಗಳಿಗಾಗಿ ಕಾರಿನ ಖರೀದಿ ಬೆಲೆ ಏರಿಸಿದ್ದು ನ್ಯಾಯ ಸಮ್ಮತವೇ? ಮತ್ತು ಕೋವಿಡ್ ಯೋಧರು ಕರ್ತವ್ಯ ಸಂಧರ್ಭದಲ್ಲಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದು ಅವರ ಕುಟುಂಬಗಳಿಗೂ ಇನ್ನೂ ಕೋವಿಡ್ ವಿಮೆ ತಲುಪಿಸದೆ ಅವರೊಂದಿಗೆ ಅನ್ಯಾಯ ಮಾಡಿದ ಸರಕಾರವು ಐಷಾರಾಮಿ ಕಾರಿನಲ್ಲಿ ಪ್ರಯಾಣಿಸಲು 22 ಲಕ್ಷದಿಂದ 23 ಲಕ್ಷ ಏರಿಕೆ ಮಾಡಿ ಜನರ ಜೊತೆ ಚೆಲ್ಲಾಟ ಆಡುತ್ತಿದೆ.

ಜನರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡಲು ಮುಂದಾಗದೇ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬುದಾಗಿ ಕಾರಣ ನೀಡಿ ತಮಗೆ ಬೇಕಾದ ರೀತಿಯಲ್ಲಿ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವುದು ಜನವಿರೋಧಿ ಸರಕಾರದ ನಡೆಯಾಗಿದೆ. ಎಷ್ಟೋ ಕುಟುಂಬಗಳು ಈಗಲೂ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದೆ.ಆದಾಯ ಮಿತಿಯನ್ನು ಕೂಡಲೇ ಕೈಬಿಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರುಈ ಸಂದರ್ಭದಲ್ಲಿ ಹೇಳಿದರು.