ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.13: ಜೆಎನ್ಯುನಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ ತಂಡದಲ್ಲಿದ್ದ ಮಹೀಳೆಯನ್ನು ದಿಲ್ಲಿ ಪೊಲೀಸರು ಗುರುತಿಸಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಮುಖಕ್ಕೆ ಕಪ್ಪಬಟ್ಟೆ ಧರಿಸಿ ದುಷ್ಕರ್ಮಿಗಳ ತಂಡದೊಂದಿಗೆ ಇದ್ದಳು. ಈಕೆಗೆ ಪ್ರಕರಣ ತನಿಖಿಸುವ ಎಸ್ಐಟಿ ತಂಡದ ಮುಂದೆ ಹಾಜರಾಗಲು ಪೊಲೀಸರು ನೋಟಿಸು ನೀಡಿದ್ದಾರೆ.
ಜನವರಿ ಐದರಂದು ನಡೆದ ದಾಳಿಯ ದೃಶ್ಯಗಳಿಂದ ಮುಖ ಮರೆಸಲು ಎಬಿವಿಪಿ ನಾಯಕಿ ಕೋಮಲ್ ಸಿಂಗ್ ಕಪ್ಪುಬಟ್ಟೆ ಧರಿಸಿದ್ದಳು. ಈಕೆ ದಿಲ್ಲಿ ವಿಶ್ವವಿದ್ಯಾನಿಲಯದ ದೌಲತ್ರಾಂ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಳೆ. ಕೋಮಲ್ ಸಿಂಗ್ ದೌರ್ಜನ್ಯದಲ್ಲಿ ಭಾಗವಹಿಸಿದ ಕುರಿತು ಧ್ವನಿಮುದ್ರಣ ದಾಖಲೆಯೂ ಸಿಕ್ಕಿದೆ. ಸಬರಮತಿ ಹಾಸ್ಟೆಲ್ನ ಆಹಾರ ಕೋಣೆಯ ಮೂಲಕ ಕೋಮಲ್ ಜೆಎನ್ಯು ಒಳಗೆ ಬಂದಿದ್ದಳು ಎಂದು ಜೆಎನ್ಯುನ ಎಬಿವಿಪಿ ನಾಯಕನ ಧ್ವನಿಯಿಂದ ತಿಳಿದು ಬಂದಿದೆ. ದಿಲ್ಲಿ ಪೊಲೀಸರು ಇದನ್ನು ಪುರಾವೆಯಾಗಿ ಸ್ವೀಕರಿಸಿಲ್ಲ. ಮತ್ತು ದುಷ್ಕರ್ಮಿಗಳನ್ನು ಬಂಧಿಸಲು ಯತ್ನಿಸಿಲ್ಲ ಎಂದು ಜೆಎನ್ಯು ವಿದ್ಯಾರ್ಥಿ ಯೂನಿಯನ್ ಆರೋಪಿಸುತ್ತಿದೆ.
ಇದೇವೇಳೇ ಜೆಎನ್ಯುನ ಎಬಿವಿಪಿ ನಾಯಕರಾದ ಅಕ್ಷತ್ ಅಶ್ವತಿ, ರೋಹಿತ್ ಶಾ ಸಹಿತ 49 ಮಂದಿಗೆ ಹಾಜರಾಗುವಂತೆ ಪೊಲೀಸರು ನೋಟಿಸು ಜಾರಿ ಮಾಡಿದ್ದಾರೆ. ಉಳಿದ ಆರೋಪಿಗಳು ಭೂಗತರಾಗಿದ್ದಾರೆ.