ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಮತ್ತು…

0
2468

ಹುಲಿಗಳಲ್ಲಿ ಸೆಲೆಬ್ರಿಟಿ ಹುಲಿಗಳು ಯಾಕಿವೆ? ಯಾವ ಕಾರಣಕ್ಕಾಗಿ ಒಂದು ಹುಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುತ್ತದೆ? ಅದಕ್ಕೆ ಮಾನದಂಡಗಳಿವೆಯೇ? ಅದು ಪ್ರತಿಭೆ ಆಧಾರಿತವೇ, ಆಕಾರ ಆಧಾರಿತವೇ ಅಥವಾ ಇನ್ನಾವುದಾದರೂ ವಿಶೇಷತೆ ಒಂದು ಹುಲಿಯನ್ನು ಸೆಲೆಬ್ರಿಟಿಗೊಳಿಸುವುದರಲ್ಲಿದೆಯೇ? ರಾಜ ಸ್ಥಾನದ ರಾಂತಂಬೋರೆ ರಾಷ್ಟ್ರೀಯ ರಕ್ಷಿತಾರಣ್ಯದ ಉಸ್ತಾದ್ ಅಥವಾ ಮಚಲಿ ಎಂಬ ಹುಲಿ, ಕರ್ನಾಟಕದ ಬಂಡೀಪುರ ರಾಷ್ಟ್ರೀಯ ರಕ್ಷಿತಾರಣ್ಯದ ಪ್ರಿನ್ಸ್ ಎಂಬ ಹುಲಿ, ಮಹಾರಾಷ್ಟ್ರದ ಚಂದ್ರಾಪುರದ ರಕ್ಷಿತಾರಣ್ಯದ ಜೈ ಮತ್ತು ಬಿಟ್ಟು ಎಂಬ ಹುಲಿಗಳು ಇಂಥ ಪ್ರಶ್ನೆಗಳನ್ನು ಆಗಾಗ ಹುಟ್ಟು ಹಾಕುತ್ತಲೇ ಇರುತ್ತವೆ. ಈ ಹಿಂದೆ ಒಮ್ಮೆ ಉಸ್ತಾದ್ ಹುಲಿಯು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿತ್ತು. ಚಂದ್ರಾಪುರ್ ಅರಣ್ಯದಿಂದ ಜೈ ಹುಲಿಯು ಕಾಣೆಯಾಗಿದೆ ಎಂಬ ಸುದ್ದಿಯೂ ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯುವಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಈ ದೇಶದ ರಕ್ಷಿತಾರಣ್ಯಗಳಲ್ಲಿ ನೂರಾರು ಹುಲಿಗಳಿವೆ. ಈ ಹುಲಿ ಗಳ ನಡುವೆ ಪ್ರಣಯ, ಜಗಳ, ಸಾವು, ಅನಾರೋಗ್ಯ.. ಎಲ್ಲವೂ ನಡೆಯುತ್ತಲೂ ಇರುತ್ತವೆ. ಆದರೆ ಇವುಗಳಲ್ಲಿ ನಾಲ್ಕೈದು ಹುಲಿಗಳನ್ನು ಆಯ್ದು, ಅವುಗಳಿಗೆ ಪ್ರತ್ಯೇಕ ಹೆಸರು ಕೊಟ್ಟು, ಅವುಗಳ ಬಗ್ಗೆ ವಿಶೇಷ ಗಮನ ಹರಿಯುವಂತೆ ಮಾಡುವುದು ಯಾತಕ್ಕಾಗಿ? ಅದರ ಉದ್ದೇಶವೇನು? ಬಹುಶಃ, ಜನರನ್ನು ಈ ರಕ್ಷಿತಾರಣ್ಯಗಳ ಕಡೆಗೆ ಆಕರ್ಷಿಸಲು ಮತ್ತು ಅವರಲ್ಲಿ ಈ ಹುಲಿಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವುದರ ಹೊರತಾಗಿ ಇದಕ್ಕೆ ಬೇರೆ ಕಾರಣಗಳಿರುವ ಸಾಧ್ಯತೆಯಿಲ್ಲ. ಬಹುಶಃ, ಉಸ್ತಾದ್ ನಂಥ ಹುಲಿಗಳು ನಮ್ಮ ದೇಶದ ರಕ್ಷಿತಾರಣ್ಯಗಳಲ್ಲಿ ಅನೇಕ ಇರಬಹುದು ಮತ್ತು ಅವುಗಳಲ್ಲಿ ಉಸ್ತಾದ್‍ಗಿಂತಲೂ ಗಟ್ಟಿಮುಟ್ಟಾದ ಹಾಗೂ ಚೆಲುವಾದ ಹುಲಿಗಳೂ ಇರಬಹುದು. ಮುಂದೊಂದು ದಿನ ಇವುಗಳಲ್ಲಿ ಒಂದು ಹುಲಿಗೆ ಕುತೂಹಲಕಾರಿ ಕತೆಯೊಂದಿಗೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಭಾಗ್ಯವೂ ಸಿಗಬಹುದು. ಆದಾಯ ಹೆಚ್ಚಿಸಿಕೊಳ್ಳುವ ತಂತ್ರ ಇದು. ಜನರನ್ನು ಸೆಳೆಯುವ ಬುದ್ಧಿವಂತಿಕೆಯೂ ಇದರ ಹಿಂದಿದೆ. ಹಾಗಂತ, ಒಂದು ಸರಕಾರವೇ ಇಂಥ ತಂತ್ರವನ್ನು ತನ್ನ ಕಾರ್ಯನೀತಿಯಾಗಿ ಅಳ ವಡಿಸಿಕೊಂಡರೆ ಹೇಗಾಗಬಹುದು? ಕಳೆದ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡವಳಿಕೆಗಳು, ವಿದೇಶಾಂಗ ನೀತಿಗಳು, ಉಡುಗೊರೆಗಳು ಮತ್ತು ಕಾರ್ಯಕ್ರಮ ಆಯೋಜನೆಗಳು ಹುಲಿಗಳ ಸೆಲೆಬ್ರಿಟಿ ತಂತ್ರವನ್ನು ನೆನಪಿಸುವಂತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳಕ್ಕೆ ಭೇಟಿ ಕೊಟ್ಟರು. ಪ್ರಸಿದ್ಧ ಪಶುಪತಿನಾಥ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಶನದ ವೇಳೆ ನರೇಂದ್ರ ಮೋದಿಯವರು ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಹಣೆಗೆ ಗಂಧವನ್ನು ಹಚ್ಚಿಕೊಂಡಿದ್ದರು. ಇದರಲ್ಲಿ ತಪ್ಪು ಖಂಡಿತ ಇಲ್ಲ. ಇದು ಅವರವರ ಸ್ವಾತಂತ್ರ್ಯ. ಇದೇ ವೇಳೆ, ಸೆಕ್ಯುಲರ್ ಭಾರತದ ಪ್ರಧಾನಿ ಯೋರ್ವರು ಭಾರತದ ಕೆಲವು ನಿರ್ದಿಷ್ಟ ಸಂಘಟನೆಗಳಲ್ಲಿ ಮಾತ್ರ ಕಡ್ಡಾಯದಂತೆ ಪಾಲಿಸಲಾಗುತ್ತಿರುವ ‘ಕೇಸರಿ ಶಾಲು, ಗಂಧ ಮತ್ತು ರುದ್ರಾಕ್ಷಿ ಮಾಲೆ’ ಧಾರಣೆಯಲ್ಲಿ ಕಾಣಿಸಿಕೊಳ್ಳುವುದನ್ನು ತೀರಾ ಸಹಜವಾಗಿ ಕಾಣಬಹುದೇ? ಅದರ ಹಿಂದೆ ಅಸಹಜ ವಾದುದು ಇರಲಾರದೇ? ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿರುವ ಅದೇ ಧರ್ಮವನ್ನು ಅನುಸರಿಸುವವರು ಕಾಂಗ್ರೆಸ್, ಕಮ್ಯುನಿಸ್ಟ್, ಆಪ್, ತೃಣಮೂಲ, ಜನತಾದಳಗಳು, ತೆಲುಗುದೇಶಂ, ಟಿ.ಆರ್.ಎಸ್., ಸಮಾಜವಾದಿ.. ಸಹಿತ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲ ದೇವಾಲಯ ಪ್ರವೇಶದ ವೇಳೆ ಇದೇ ಉಡುಪು ನೀತಿಯನ್ನು ಅನುಸರಿಸುವುದು ಕಡಿಮೆ. ಮೋದಿಯವರ ಉಡುಗೆ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ಅವರು ಸೆಕ್ಯುಲರ್ ಭಾರತದಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಂಘ ಟನೆಗಳನ್ನು ತನ್ನ ಉಡುಗೆಯಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ ಆ ಸಂಘಟನೆಗಳನ್ನು ಮತ್ತು ಅವು ಪ್ರತಿಪಾದಿಸುವ ವಿಚಾರ ಧಾರೆಗಳನ್ನು ನೇಪಾಳಿಗರಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಇದೆ. ನಿರ್ದಿಷ್ಟ ವಿಚಾರಧಾರೆಗೆ ಓರ್ವ ಪ್ರಧಾನಿ ರಾಯಭಾರಿ ಯಾಗುವ ತಂತ್ರ ಇದು. ಸೆಕ್ಯುಲರ್ ಸಂವಿಧಾನವನ್ನು ತನ್ನ ನಡೆ-ನುಡಿಯಲ್ಲಿ ಪ್ರತಿನಿಧಿಸಬೇಕಾದ ಪ್ರಧಾನಿಯೋರ್ವರು ಆ ಸಂವಿಧಾನಕ್ಕೆ ತೀರಾ ವಿರುದ್ಧವಾದ ವಿಚಾರಧಾರೆಯನ್ನು ಹೇಗೆ ನಾಜೂಕಾಗಿ ಪ್ರಚಾರ ಮಾಡಿದರು ಅನ್ನುವುದಕ್ಕೆ ಸಾಕ್ಷಿ ಇದು. ಇದಕ್ಕೆ ಇನ್ನೊಂದು ಉದಾಹರಣೆ ಅಬುಧಾಬಿ ಭೇಟಿ. 2015ರಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಯುಎಇ ಸರಕಾರವು ಮಹತ್ವದ ಘೋಷಣೆ ಯೊಂದನ್ನು ಹೊರಡಿಸಿತು. ಅಬುಧಾಬಿಯಲ್ಲಿ ದೇವಾಲಯ ವೊಂದನ್ನು ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಲಾಗಿರುವ ಘೋಷಣೆ ಅದು. ಈ ಘೋಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ: