ಸನ್ಮಾರ್ಗ ವಾರ್ತೆ
ಇಂದು ಮಾನವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಪ್ರವಾದಿ ಮುಹಮ್ಮದ್ (ಸ) ಅವರ ಶಿಕ್ಷಣ ಹಾಗೂ ಬೋಧನೆಯಲ್ಲಿ ಅಡಕವಾಗಿವೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ ಅವರು ಹೇಳಿದರು.
ಅವರು ಇತ್ತೀಚೆಗೆ ಜ.ಇ.ಹಿಂದ್ ಮೈಸೂರು ರೋಡ್ ವತಿಯಿಂದ ವಾಲ್ಮೀಕಿ ನಗರದಲ್ಲಿರುವ ಇಸ್ಲಾಮಿಕ್ ಸೆಂಟರ್ ನಲ್ಲಿ “ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಎಂಬ ವಿಷಯದ ಕುರಿತು ಹಮ್ಮಿಕೊಂಡ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹಿಂದೂ ಮುಸ್ಲಿಂ ಪರಸ್ಪರ ವೈರಿಗಳೆಂದು ಕೆಲವರು ಹೇಳುತ್ತಾರೆ. ಆದರೆ ನಿಜವಾಗಿ ಅಶ್ಲೀಲತೆ, ಮಧ್ಯಪಾನ, ಬಡ್ಡಿ, ಲಂಚ ಎಂಬಂತಹ ಕೆಡುಕುಗಳೇ ವಾಸ್ತವದಲ್ಲಿ ನಮ್ಮೆಲ್ಲರ ವೈರಿಗಳು. ಇವುಗಳನ್ನು ಸಮಾಜದಿಂದ ಹೊಡೆದುಡಿಸುವಂತಹ ಕೆಲಸವಾಗಬೇಕು ಎಂದವರು ಹೇಳಿದರು.
ಪ್ರವಾದಿ ಮುಹಮ್ಮದ್ (ಸ) ಅವರು ಕೇವಲ ಮುಸ್ಲಿಮರ ಪ್ರವಾದಿ ಮಾತ್ರವಲ್ಲ ಅವರು ಈ ಜಗತ್ತಿನಲ್ಲಿರುವ ಎಲ್ಲ ಮನುಷ್ಯರ ಪ್ರವಾದಿಯಾಗಿದ್ದಾರೆ. ಅವರ ಸಂದೇಶವು ಸಾರ್ವಕಾಲಿಕವಾಗಿದೆ, ಸಾರ್ವತ್ರಿಕವಾಗಿದೆ, ಅಧಿಕೃತವಾಗಿದೆ ಮತ್ತು ಪರಿಪೂರ್ಣವಾಗಿದೆ ಎಂದವರು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಪ್ರಾಸ್ತಾವಿಕ ಭಾಷಣ ಮಾಡಿದರು. ಇಮ್ರಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಹಮ್ಮದ್ ನಸ್ರುಲ್ಲಾಹ್ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.
ಜ.ಇ.ಹಿಂದ್ ಸ್ಥಾನಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗುಡಿಹಾಳ, ಬೆಂಗಳೂರ ನಗರ ಕಾರ್ಯದರ್ಶಿ ಡಾ. ಸಯ್ಯದ್ ಫಕ್ರುದ್ದೀನ್ ಖಾಝಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.