ಸನ್ಮಾರ್ಗ ವಾರ್ತೆ
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಲ್ಲಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸವಾಲೆಸೆದಿದ್ದು, ತಾನು ಸೋತರೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
ಟಿಎಂಸಿಯ ಮಥುರಾಪುರದ ಅಭ್ಯರ್ಥಿ ಬಾಪಿ ಹಲ್ಡರ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಅಭಿಷೇಕ್ ಬ್ಯಾನರ್ಜಿ ಅವರು, ಟಿಎಂಸಿಯಲ್ಲಿ ಎರಡನೇ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲ್ಪಡುವ ಅಭಿಷೇಕ್ ಬ್ಯಾನರ್ಜಿ ತಾನು ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಮಾಡಲು ಅಮಿತ್ ಶಾ ಅವರಿಗೆ ಇನ್ನೆರಡು ಆಯ್ಕೆಗಳು ಕೂಡಾ ಇದೆ ಎಂದಿದ್ದಾರೆ.
“ಅಭಿಷೇಕ್ ಬ್ಯಾನರ್ಜಿ ಸಕ್ರಿಯ ರಾಜಕಾರಣವನ್ನು ತೊರೆಯಬೇಕೆಂದು ನೀವು ಬಯಸಿದರೆ, ನಾನು ಇಂದು ನಿಮಗೆ ಒದಗಿಸುವ ಮೂರು ಆಯ್ಕೆಗಳಲ್ಲಿ ಯಾವುದನ್ನಾದರೂ ನೀವು ಮಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ಮೊದಲನೆಯದಾಗಿ ನೀವು ರಾಜ್ಯಕ್ಕೆ ಬಾಕಿ ಇರುವ 1,64,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ, ಅದಾದ 24 ಗಂಟೆಗಳ ಒಳಗೆ ನಾನು ನಿವೃತ್ತಿ ಪಡೆಯುತ್ತೇನೆ. ಎರಡನೆಯದಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣವನ್ನು ಬಿಡುಗಡೆ ಮಾಡುವ ಆಯ್ಕೆ ನಿಮಗಿದೆ” ಎಂದು ತಿಳಿಸಿದ್ದಾರೆ.
“ಡೈಮಂಡ್ ಹಾರ್ಬರ್ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ನಿಮ್ಮ ಮೂರನೇ ಆಯ್ಕೆಯಂತೆ ನೀವು (ಅಮಿತ್ ಶಾ) ಈ ಕ್ಷೇತ್ರದಿಂದ ಸ್ಪರ್ಧಿಸಿ, ನನ್ನನ್ನು ಸೋಲಿಸಿ. ಸೋತರೆ ನಾನು ರಾಜಕೀಯವನ್ನು ಶಾಶ್ವತವಾಗಿ ತೊರೆಯುತ್ತೇನೆ” ಎಂದು ಅಭಿಷೇಕ್ ಬ್ಯಾನರ್ಜಿ ಸವಾಲೆಸೆದಿದ್ದಾರೆ.