ನಾಗಾಲ್ಯಾಂಡ್‌ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಘಟನೆ ದುರದೃಷ್ಟಕರ: ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

0
208

ಸನ್ಮಾರ್ಗ ವಾರ್ತೆ

ದೆಹಲಿ: ನಾಗಾಲ್ಯಾಂಡ್‌ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆ ದುರದೃಷ್ಟಕರ. ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಾಗರಿಕರ ಸಾವಿಗೆ ಸೇನೆ ವಿಷಾದ ವ್ಯಕ್ತಪಡಿಸಿದೆ. ಗೃಹ ಇಲಾಖೆ ನಾಗಾಲ್ಯಾಂಡ್ ಸರ್ಕಾರದ ಜತೆ ಸಂಪರ್ಕದಲ್ಲಿದೆ. ನಾಗಾಲ್ಯಾಂಡ್ ಗವರ್ನರ್, ಸಿಎಂ ಜತೆ ಸಂಪರ್ಕದಲ್ಲಿದ್ದೇನೆ. ನಿನ್ನೆ ಇಡೀ ದಿನ ನಾನು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ತಪ್ಪು ಮಾಹಿತಿಯಿಂದ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತ್ ಶಾ ವಿವರಣೆ ವೇಳೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಲೋಕಸಭೆಯಲ್ಲಿ ಗದ್ದಲ ಉಂಟು ಮಾಡಿದ್ದಾರೆ. ಈ ಕಾರಣದಿಂದ ಕಲಾಪವನ್ನು ನಾಳೆಗೆ ಮುಂದೂಡಿ ಸ್ಪೀಕರ್ ಆದೇಶಿಸಿದ್ದಾರೆ.

ಮೃತರ ಕುಟುಂಬಸ್ಥರನ್ನು ಸಂಪರ್ಕಿಸುವ ಕೆಲಸ ಮಾಡಿದ್ದೇವೆ. ಉಗ್ರರ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತ್ತು. 21 ಕಮಾಂಡೋಗಳು ಶಂಕಿತ ಪ್ರದೇಶದಲ್ಲಿ ಕಾದು ಕುಳಿತಿದ್ದರು. ಶಂಕಿತ ವಾಹನ ಅಲ್ಲಿ ಬಂದಾಗ ನಿಲ್ಲಿಸಲು ಸೂಚಿಸಿದ್ದರು. ವಾಹನ ನಿಲ್ಲಿಸುವಂತೆ ಕಮಾಂಡೋಗಳು ಸೂಚಿಸಿದ್ದರು. ಆದರೆ ವಾಹನದಲ್ಲಿದ್ದವರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಉಗ್ರರನ್ನು ಹೊತ್ತೊಯ್ಯುತ್ತಿದ್ದಾರೆ ಎಂಬ ಶಂಕೆ ಮೇಲೆ ದಾಳಿ ಮಾಡಲಾಗಿದೆ. ಶಂಕೆ ಮೇಲೆ ವಾಹನದ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಿದ್ದಾರೆ.

ದಾಳಿ ವೇಳೆ ವಾಹನದಲ್ಲಿದ್ದ 8 ಜನರಲ್ಲಿ 6 ಜನ ಮೃತಪಟ್ಟಿದ್ದಾರೆ. ತಪ್ಪು ಮಾಹಿತಿಯಿಂದ ಘಟನೆ ನಡೆದಿದ್ದು ಸೇನೆಗೆ ಗೊತ್ತಾಗಿದೆ. ಗಾಯಗೊಂಡ ಇಬ್ಬರಿಗೆ ಯೋಧರು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಸುದ್ದಿ ತಿಳಿದು ಸ್ಥಳೀಯರು ಸೇನೆ ಸುತ್ತುವರಿದಿದ್ದಾರೆ. ಆಕ್ರೋಶದಿಂದ ಸ್ಥಳೀಯರು 2 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಭದ್ರತಾ ಪಡೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇತರ ಹಲವು ಯೋಧರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆ, ಗುಂಪು ಚದುರಿಸಲು ಭದ್ರತಾ ಪಡೆಗಳಿಂದ ದಾಳಿ ಮಾಡಲಾಗಿದೆ. ಇದು ಇನ್ನೂ 7 ನಾಗರಿಕರ ಸಾವಿಗೆ ಕಾರಣವಾಯಿತು. ಇನ್ನೂ ಕೆಲವರು ಗಾಯಗೊಂಡಿದ್ದಾರೆ . ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಸ್ಥಳೀಯ ಆಡಳಿತದಿಂದ ಪ್ರಯತ್ನ ಮಾಡಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಈಗ ನಿಯಂತ್ರಣದಲ್ಲಿದೆ. ನಾಗಾಲ್ಯಾಂಡ್ ಡಿಜಿಪಿ, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಸಂಬಂಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ಹಸ್ತಾಂತರ ಮಾಡಲಾಗಿದೆ. ರಾಜ್ಯ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು SITಗೆ ನಿರ್ದೇಶನ ನೀಡಲಾಗಿದೆ. ಘಟನೆ ಬಗ್ಗೆ ಸೇನೆಯಿಂದಲೂ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.