ಕ್ರೈಸ್ತರ ಮೇಲೆ ದಾಳಿ: ಸತ್ಯ ಬಿಚ್ಚಿಟ್ಟ ಎ.ಪಿ.ಸಿ.ಆರ್ ಸತ್ಯ ಶೋಧನಾ ವರದಿ

0
251

ಸನ್ಮಾರ್ಗ ವಾರ್ತೆ

ಕ್ರೈಸ್ತ ಸಮುದಾಯದ ಸದಸ್ಯರು ಹಾಗೂ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲೆ ಉತ್ತರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ದಾಳಿಗಳು ನಡೆದಿವೆ ಎಂದು ರವಿವಾರ ಬಿಡುಗಡೆಗೊಂಡ ಸತ್ಯಶೋಧನಾ ವರದಿಯೊಂದು ತಿಳಿಸಿದೆ.

ಎನ್‌ಜಿಒಗಳಾದ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು ಯುನೈಟೆಡ್ ಅಗೇನ್ಸ್ ಹೇಟ್ ಜಂಟಿಯಾಗಿ ‘ಕ್ರಿಶ್ಚಿಯನ್ ಅಂಡರ್ ಅಟ್ಯಾಕ್ ಇನ್ ಇಂಡಿಯಾ’ ಎಂಬ ಹೆಸರಿನಲ್ಲಿ ವರದಿಯನ್ನು ಹೊರತಂದಿದ್ದು ವರದಿಯನ್ನು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೋ ಬಿಡುಗಡೆಗೊಳಿಸಿದ್ದಾರೆ.

ದೇಶಾದ್ಯಂತ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಕ್ರೈಸ್ತರ ಮೇಲೆ 305 ಹಲ್ಲೆ ಘಟನೆಗಳು ನಡೆದಿವೆ. ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಸಹಾಯವಾಣಿಗೆ ಬಂದ ಕರೆಗಳ ಆಧಾರದಲ್ಲಿ ಈ ಅಂಕಿಅಂಶ ಒದಗಿಸಲಾಗಿದ್ದು ಸಂಸ್ಥೆಗೆ ಒಟ್ಟು 1367 ಕರೆಗಳು ಬಂದಿದ್ದವು. ಒಟ್ಟು 288 ಗುಂಪು ದಾಳಿ ಪ್ರಕರಣಗಳು ನಡೆದಿವೆ ಹಾಗೂ 28 ಪ್ರಕರಣಗಳಲ್ಲಿ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಗಳಾಗಿವೆ ಎಂದು ವರದಿ ಹೇಳಿದೆ.

ಒಟ್ಟು 305 ಪ್ರಕರಣಗಳ ಪೈಕಿ 66 ಪ್ರಕರಣಗಳು ಉತ್ತರ ಪ್ರದೇಶದಿಂದ, 47 ಪ್ರಕರಣಗಳು ಛತ್ತೀಸಗಢದಿಂದ ಹಾಗೂ 32 ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ. ಸೆಪ್ಟಂಬರಿನಲ್ಲಿ ಗರಿಷ್ಠ 69 ಪ್ರಕರಣಗಳು, ಆಗಸ್ಟ್ ತಿಂಗಳಿನಲ್ಲಿ 50 ಹಾಗೂ ಜನವರಿಯಲ್ಲಿ 37 ಪ್ರಕರಣಗಳು ವರದಿಯಾಗಿವೆ. ದಾಳಿಗಳಲ್ಲಿ 1331 ಮಹಿಳೆಯರು, 588 ಆದಿವಾಸಿಗಳು ಹಾಗೂ 513 ದಲಿತರು ಗಾಯಗೊಂಡಿದ್ದರು ಎಂದೂ ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ.