ಮಗಳು ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಕುಟುಂಬದ ಮೂವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಂದೆ

0
216

ಸನ್ಮಾರ್ಗ ವಾರ್ತೆ

ನಾಗಪಟ್ಟಣ: ಮಗಳು ದಲಿತ ಯುವಕನನ್ನು ಮದುವೆಯಾಗಿದ್ದನ್ನೇ ನೆಪವಾಗಿಸಿಕೊಂಡು ಕುಟುಂಬದ ಮೂವರನ್ನು ಕೊಲೆಗೈದು ತಂದೆ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ನಾಗಪಟ್ಟಣಂ ನಲ್ಲಿ ನಡೆದಿದೆ.

ನಾಗಪಟ್ಟಣದಲ್ಲಿ ಚಹಾದಂಗಡಿ ಇಟ್ಟುಕೊಂಡು ವೃತ್ತಿಯಲ್ಲಿದ್ದ ಲಕ್ಷ್ಮಣ್ ಎಂಬಾತ ಪತ್ನಿ ಹಾಗೂ‌ ಮಕ್ಕಳ ಸಹಿತ ಮೂವರು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನ ಹಿರಿಯ ಮಗಳು ದಲಿತ ವಿಭಾಗಕ್ಕೆ ಸೇರಿದ ಯುವಕನನ್ನು ಮದುವೆಯಾಗಿದ್ದಳು. ಹಿರಿಮಗಳು ನಾಗಪಟ್ಟಣದಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದಾಳೆ. ಇದರಿಂದಾಗಿ ತನಗೆ ಅವಮಾನವಾಯಿತೆಂದು ಭಾವಿಸಿ ಈ ಕೃತ್ಯವೆಸಗಿದ್ದಾನೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಎಂದು ನಾಗಪಟ್ಟಣ ಎಸ್‍ಐ ಜಿ. ಜವಾಹರ್ ತಿಳಿಸಿದ್ದಾರೆ.

ತಮಿಳುನಾಡಿನ ಒಳಗ್ರಾಮದಲ್ಲಿ ಜಾತಿ ತಾರತಮ್ಯ ಪರಾಕಾಷ್ಠೆಯಲ್ಲಿದೆ. ಅನ್ಯ ಜಾತಿಯಿಂದ ಮದುವೆಯಾದರೆ ಅವರ ಮೇಲೆ ದಾಳಿ ನಡೆಯುತ್ತದೆ. 2016ರಲ್ಲಿ ತಮಿಳುನಾಡಿನ ಉದುಮಲ್ ಪೇಟದಲ್ಲಿ ಯುವಕನನ್ನು ಪತ್ನಿಯ ಸಂಬಂಧಿಕರು ಸೇರಿ ಹಾಡಹಗಲೇ ಕೊಲೆ ಮಾಡಿದ್ದರು. ಈ ಘಟನೆಯಲ್ಲಿ 23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ವಿ. ಶಂಕರ್ ಹತ್ಯೆಯಾಗಿದ್ದ. ಪತ್ನಿ ಕೌಸಲ್ಯೆಗೂ ಗಂಭೀರ ಗಾಯಗೊಳಿಸಲಾಗಿತ್ತು.

ಘಟನೆಯಲ್ಲಿ ಯುವತಿ ತಂದೆ ಚಿನ್ನಸ್ವಾಮಿ ಸಹಿತ ಆರು ಮಂದಿಗೆ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆಯ ತೀರ್ಪು ನೀಡಿದೆ. 2020ರಲ್ಲಿ ಮದ್ರಾಸ್ ಹೈಕೋರ್ಟು ತಂದೆಯನ್ನು ಆರೋಪ ಮುಕ್ತಗೊಳಿಸಿ, ಇತರ ಆರೋಪಿಗಳ ಶಿಕ್ಷೆಯನ್ನು ಜೀವಾವಧಿಗೊಳಿಸಿತು. ಇನ್ನೊಂದು ಘಟನೆಯಲ್ಲಿ ಪತ್ನಿಯ ಮನೆಯವರ ದಾಳಿಗೊಳಗಾಗಿದ್ದ ದಲಿತ ವಿಭಾಗದ ಯುವಕನೋರ್ವ ರೈಲ್ವೆ ಹಳಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.