ಸನ್ಮಾರ್ಗ ವಾರ್ತೆ
ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ದಾಖಲಿಸಿರುವ ಪ್ರಕರಣಗಳಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿಯನ್ನು ರೋಸ್ ಅವೆನ್ಯೂ ನ್ಯಾಯಾಲಯ ತಿರಸ್ಕರಿಸಿದೆ.
ಎರಡು ಪ್ರಕರಣಗಳಲ್ಲಿ ಸಿಸೋಡಿಯಾ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಡಿ ಮತ್ತು ಸಿಬಿಐ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯ, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ್ದವು. ಜಾಮೀನು ನಿರಾಕರಣೆಯ ವಿರುದ್ಧ ಸಿಸೋಡಿಯಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ದೆಹಲಿ ಮದ್ಯದ ನೀತಿ ರಚನೆಯಲ್ಲಿ ಅಕ್ರಮ ನಡೆದಿದ್ದು, ದೆಹಲಿಯಲ್ಲಿ ಮದ್ಯ ಮಾರಾಟ ಕೆಲವು ಗುಂಪುಗಳಿಗೆ ಮಾತ್ರ ಸಿಗುವಂತೆ ಸಿಸೋಡಿಯಾ ರೂಪಿಸಿದ್ದಾರೆ ಎಂಬುದು ಪ್ರಕರಣ. ಫೆಬ್ರವರಿ 26 ರಂದು ಸಿಬಿಐ ಅವರನ್ನು ಮೊದಲು ಬಂಧಿಸಿತ್ತು. ನಂತರ ಇಡಿ ವಿಚಾರಣೆ ನಡೆಸಿ ಬಂಧಿಸಿತು. ಅಬಕಾರಿ ಇಲಾಖೆಯನ್ನು ಹೊಂದಿದ್ದ ಸಿಸೋಡಿಯಾ ಫೆಬ್ರವರಿ 28 ರಂದು ದೆಹಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.