ಸನ್ಮಾರ್ಗ ವಾರ್ತೆ
ಚೆನ್ನೈ: ತಮಿಳುನಾಡಿನಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮವಾಗಿ 24 ಮಂದಿ ಗಾಯಗೊಂಡಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
ಸೆಟ್ಟೂರಿನ ಸಮೀಪದ ಅಚ್ಚನ್ಕುಳಂ ಗ್ರಾಮದಲ್ಲಿ ಘಟನೆ ನಡೆದಿದೆ. ಇಂದು ಮಧ್ಯಾಹ್ನ 1.45ಕ್ಕೆ ಬೆಂಕಿ ಕೆನ್ನಾಲಿಗೆ ಆವರಿಸಿದ್ದು, ಅಗ್ನಿ ಶಾಮಕದಳ ಮತ್ತು ಪೊಲೀಸರಿಗೆ ಮೊದಲು ಘಟನಾ ಸ್ಥಳಕ್ಕೆ ಸಮೀಪಿಸಲು ಆಗಲಿಲ್ಲ. ನಂತರ ಸಾತ್ತೂರ್, ಶಿವಕಾಶಿ, ವೆಂಬನ್ಕೊಟೈ ಸ್ಥಳಗಳಿಂದ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಬಂದವು. ಪಟಾಕಿ ತಯಾರಿಸುವ ನಾಲ್ಕು ಕಟ್ಟಡಗಳು ನಾಶವಾಗಿದೆ ಎನ್ನಲಾಗತ್ತಿದೆ.
ಶ್ರೀ ಮಾರಿಯಮ್ಮಾಳ್ ಫಯರ್ ವರ್ಕರ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಎಂಟು ಮೃತದೇಹಗಳನ್ನು ಇದುವರೆಗೆ ಪತ್ತೆಹಚ್ಚಲಾಗಿದೆ. ಗಾಯಗೊಂಡ 24 ಮಂದಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ತಯಾರಿಸುವ ವಸ್ತುಗಳು ಘರ್ಷಿಸಿ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.