ಭಾರತಕ್ಕೆ ಶ್ರೇಷ್ಠ ಧಾರ್ಮಿಕ ಪರಂಪರೆ ಇದೆ: ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ವಲಿಯುಲ್ಲಾಹ್ ಫಲಾಹಿ

0
454

ಸನ್ಮಾರ್ಗ ವಾರ್ತೆ

ತಾಳಿಕೋಟಿ: ಭಾರತ ವಿಶ್ವದಲ್ಲಿ ಶ್ರೇಷ್ಠವಾದ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ವಿಭಿನ್ನ ಜಾತಿ ಧರ್ಮದ ಜನರು ಶತ-ಶತ ಮಾನಗಳಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದಾರೆ. ಕೂಡಿ ಬಾಳುವುದು ಈ ದೇಶದ ಮಣ್ಣಿನ ಗುಣ ಧರ್ಮವಾಗಿದೆ. ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ವಲಿಯುಲ್ಲಾಹ್ ಸಯೀದಿ ಫಲಾಹಿ ಹೇಳಿದರು.

ತಾಳಿಕೋಟೆಯ ಟಿಪ್ಪು ನಗರದಲ್ಲಿ ಸನ್ಮಾರ್ಗ ಟ್ರಸ್ಟ್ ವತಿಯಿಂದ ನಿರ್ಮಿಸಿದ ನೂತನ ಆಲಾ ಮಸೀದಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮೀಯರು ಕೂಡಿ ಹೋರಾಟ ಮಾಡಿದ್ದೇವೆ. ಪಡೆದುಕೊಂಡ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇಶದಲ್ಲಿ ಪರಸ್ಪರ ಅಪನಂಬಿಕೆ ತಪ್ಪು ತಿಳುವಳಿಕೆಯ ವಾತಾವರಣ ನಿರ್ಮಾಣ ಆಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದಲೇ ದೇಶದ ನಿರ್ಮಾಣ ಹಾಗೂ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕಾಗಿದೆ. ಎಲ್ಲ ಧರ್ಮಗಳು ಶಾಂತಿ ಮತ್ತು ಪ್ರೀತಿಯನ್ನೇ ಬೋಧಿಸುತ್ತವೆ. ಮನಸ್ಸುಗಳನ್ನು ಕಟ್ಟುವ ಕೆಲಸ ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಉಪಾಧ್ಯಕ್ಷ ಮೌಲಾನಾ ಮೊಹಮ್ಮದ್ ಯೂಸೂಫ್ ಕನ್ನಿ ಮಾತನಾಡಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯು ದೇಶದ ಎಲ್ಲಾ ಬಾಂಧವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಾಮರಸ್ಯವನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ನಾವೆಲ್ಲರೂ ಸಮಾನ ವೇದಿಕೆಗಳನ್ನು ನಿರ್ಮಾಣ ಮಾಡಿ ಈ ಕೆಲಸವನ್ನು ಮಾಡಬೇಕಾದ ಅಗತ್ಯ ಇದೆ ಎಂದರು.

ವೇದಿಕೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸೈಯದ್ ಶಕೀಲ್ ಅಹಮದ್ ಖಾಜಿ, ಡಾ. ಪ್ರಭುಗೌಡ ಚಬನೂರ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಶಿಕ್ಷಕ ಲಾಲ್ ಹುಸೇನ ಕಂದಗಲ್ಲ್, ಪ್ರಭುಗೌಡ ಮದರ್ಕಲ್, ಆರ್ .ಎಲ್. ಕೊಪ್ಪದ ಜೈಭೀಮುತ್ತಗಿ, ಪುರಸಭೆ ಸದಸ್ಯ ಮುದಕಪ್ಪ ಬಡಿಗೇರ, ಅಲ್ಲಾಭಕ್ಷ್ ನಮಾಜಕಟ್ಟಿ, ಕೆ.ಆರ್.ಚಿತ್ತರಗಿ ಸಯ್ಯದ್ ಬಾಹುದ್ದೀನ್ ಖಾಜಿ, ಮೆಹಬೂಬ ಆಲಂ ಬಡಗಣ, ಅಬ್ದುಲ್ ಖಾದೀರ್ ಜಾಮಯಿ, ಹಸನ್ ಕೊರಕಿ, ಇಬ್ರಾಹಿಂ ಮನ್ಸೂರ್, ಅಬ್ದುಲ್ ಸತ್ತಾರ್ ಅವಟಿ, ಜಮಾಅತೆ ಇಸ್ಲಾಮೀ ಸ್ಥಳೀಯ ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ ಉಪಸ್ಥಿತರಿದ್ದರು.