ಸನ್ಮಾರ್ಗ ವಾರ್ತೆ
ಪ್ರಸ್ತುತ ದಿನಗಳಲ್ಲಿ ನಾನ ರೂಪಗಳಲ್ಲಿ ಚಂಚಲವಾಗಿರುವ ಸಮಾಜದಲ್ಲಿ ಜನರ ಮಾನಸಿಕ ದೃಢತೆ ಹೆಚ್ಚಿಸುವಲ್ಲಿ ಮಾಧ್ಯಮ ಕ್ಷೇತ್ರ ಸಕಾರಾತ್ಮಕ ಸ್ಪಂದನೆ ನೀಡಿ ಅಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಅಗತ್ಯ ಇದೆ ಎಂದು ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಸ್ಥಾನಿಯ ಸಂಪಾದಕ ಯು ಕೆ ಕುಮಾರನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಕಲ್ಲಚ್ಚು ಪ್ರಕಾಶನದ 99 ಮತ್ತು ನೂರನೇ ಕೃತಿ ಆಗಿ ಮಹೇಶ ಆರ್ ನಾಯಕ್ ಅವರ ಕೂದಲಿಗೆ ಡೈ ಮಾಡುವಾಗ ಕವನ ಸಂಕಲನ ಹಾಗೂ ರಾವಣ ವೀಣೆ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಿಕೆಗಳು ಸಾಹಿತ್ಯ ಸಂಬಂಧಿ ಬರಹಗಳಿಗೆ ಮತ್ತಷ್ಟು ಪ್ರಾಮುಖ್ಯ ಕೊಡುವ ಅಗತ್ಯದ ಬಗ್ಗೆ ಈ ಸಂದರ್ಭದಲ್ಲಿ ಅವರು ಬೆಳಕು ಚೆಲ್ಲಿದರು.
ಕವಯಿತ್ರಿರಾದ ಅಕ್ಷಯ ಆರ್ ಶೆಟ್ಟಿ ಮತ್ತು ಅಕ್ಷತ ರಾಜ್ ಪೆರ್ಲ ಕೃತಿ ಪರಿಚಯ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಡಿಯಾಲ್ ಬೈಲ್ ಪ್ರೆಸ್ ಮುಖ್ಯಸ್ಥ ವಂ. ವಿನ್ಸೆಂಟ್ ಸಲ್ಡಾನ್ಹಾ, ವೆರಿಟೋ ಮಾಧ್ಯಮ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ್ ಪೆಜತ್ತಾಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ಹಿಂದಿನ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರಾಗಿ ಈಗ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಉಮರ್ ಯು ಎಚ್ ಅವರನ್ನು ಅಭಿನಂದಿಸಲಾಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಪೊ. ಕೃಷ್ಣಮೂರ್ತಿ, ರಘು ಇಡ್ಕಿದು, ಮಾರ್ಷಲ್ ಡಿಸೋಜ, ಎನ್ ವಿ ಪೌಲೊಸ್, ನೇಮಿರಾಜ್ ಶೆಟ್ಟಿ, ಸುಧನ್ ಉರ್ವ ಪ್ರದೀಪ ರೈ, ಇಕ್ಬಾಲ್ ಕುತ್ತಾರ್, ಗಂಗಾಧರ ಪಿಲಿಯೂರ್ ಮತ್ತು ಇತರರು ಭಾಗವಹಿಸಿದ್ದರು.