ಸನ್ಮಾರ್ಗ ವಾರ್ತೆ
ಕೊಲ್ಕತಾ,ಮಾ.11: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾಲಿಗೆ, ತೋಳಿಗೆ ಮತ್ತು ಕೊರಳಿಗೆ ನೂಕು ನುಗ್ಗಲು ಸೃಷ್ಟಿಯಾಗಿ ಗಾಯಗೊಂಡಿದ್ದು ಅವರನ್ನು ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಿಗೆ ನೋವು ನಿವಾರಕ ನೀಡಲಾಗುತ್ತಿದೆ. ಮಮತಾ ಬ್ಯಾನರ್ಜಿಯವರನ್ನು 48 ಗಂಟೆ ತೀವ್ರ ನಿಗಾದಲ್ಲಿ ಇರಿಸಲಾಗಿದ್ದು ಅವರಿಗೆ ಉಸಿರಾಟದಲ್ಲಿ ಅಡಚಣೆ ಕೂಡ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ದಿನ ನಂದಿಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿತ್ತು.
ಮಮತಾರ ನ್ಯೂರಾಲಜಿಕಲ್ ಪರೀಕ್ಷೆ, ಎಕ್ಸ್ರೇ ಪರಿಶೀಲನೆ ನಡೆಯುತ್ತಿದೆ. ಬಾಂಗ್ಗುರುನ ಇನ್ಸ್ಟಿಟ್ಯೂಟ್ ಆಫ್ ನ್ಯೂರೊ ಸಯನ್ಸ್ನಿಂದ ಎಂಆರ್ಐ ಪರೀಕ್ಷೆಗಾಗಿ ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆತರಲಾಗಿದೆ. ಬ್ಯಾನರ್ಜಿಯವರ ಎಡಗಾಲಿಗೆ ಗಂಭೀರ ಗಾಯ ಆಗಿದೆ ಎನ್ನಲಾಗುತ್ತಿದೆ.
ಇದೇವೇಳೆ ಬ್ಯಾಂಡೇಜಿನೊಂದಿಗೆ ಆಸ್ಪತ್ರೆಯಲ್ಲಿರುವ ಮಮತಾರ ಚಿತ್ರವನ್ನು ಸಂಬಂಧಿಕ ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಗೆ ಮೇ ಎರಡರಂದು ಜನರು ಉತ್ತರ ನೀಡಲಿದ್ದಾರೆ ಎಂದು ಅಭಿಷೇಕ್ ಟ್ವೀಟ್ ಮಾಡಿದ್ದಾರೆ.