ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸಂಸದ ನಳಿನ್ ಒತ್ತಾಯ

0
411

ಸನ್ಮಾರ್ಗ ವಾರ್ತೆ

ಮಂಗಳೂರು: ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯರಾದ ಆರ್.ಕೆ. ಪಾಂಡೆ ಇವರನ್ನು ನವದೆಹಲಿ ಕಚೇರಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಪ್ರಮುಖವಾಗಿ ಈಗಾಗಲೇ ಭಾರತ್ ಮಾಲಾ ಯೋಜನೆಯಡಿ ಮಂಜೂರಾದ ಮುಲ್ಕಿ-ಕಿನ್ನಿಗೋಳಿ -ಮೂರುಕಾವೇರಿ -ಕಟೀಲು -ಪೊಳಲಿ -ಬಿ. ಸಿ.ರೋಡ್ -ಮೆಲ್ಕಾರ್ -ತೊಕ್ಕೊಟ್ಟು ರಸ್ತೆಯ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಫಂದಿಸಿದ ಎನ್.ಎಚ್.ಎ.ಐ (ಯೋಜನೆಗಳು) ಸದಸ್ಯ ಆರ್.ಕೆ. ಪಾಂಡೆ ಇವರು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದಲ್ಲದೇ ಸಂಸದರ ಇತರ ಪ್ರಮುಖ ಬೇಡಿಕೆಗಳನ್ನು ಪೂರೈಸುವುದಾಗಿ ತಿಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯ ಆರ್.ಕೆ.ಪಾಂಡೆ ಇವರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಸಾಣೂರು ನಿಂದ ಬಿಕರ್ನಕಟ್ಟೆವರೆಗಿನ ಚತುಷ್ಟ್ಪತ ಕಾಮಗಾರಿಗೆ ಅಡ್ಡಿಯಾಗಿರುವ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶಿರಾಡಿ ಘಾಟ್ ಸುರಂಗ ಮಾರ್ಗದ ಕಾಮಗಾರಿಗೆ ಡಿ.ಪಿ.ಆರ್ ಮಾಡಲು ಸೂಕ್ರ ಕ್ರಮ ಕೈಗೊಳ್ಳಲಾಗುವುದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿಯಿಂದ ಕುಶಾಲನಗರ ವರೆಗಿನ 126.00 ಕಿ.ಮೀ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯವು ಪ್ರಗತಿಯಲ್ಲಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬಿ.ಸಿ.ರೋಡ್ ನಿಂದ ಪೆರಿಯಶಾಂತಿವರೆಗಿನ ಚತುಷ್ಪಥ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆ.ಎನ್.ಆರ್  ನಿರ್ಮಾಣ ಕಂಪನಿಗೆ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.