ಸ್ವಾತಂತ್ರ್ಯದ ಕೂಗಿಗಿಂತ ಜೈಲಿನ ಗೋಡೆಗಳು ಎತ್ತರವಿಲ್ಲ!- “ಪ್ರಧಾನ ಜೈಲರ್”ಗೆ ಹಿರಿಯ ಪತ್ರಕರ್ತನ ಎಚ್ಚರಿಕೆಯ ಪತ್ರ

0
543

ರವೀಶ್ ಕುಮಾರ್, ಎನ್‌ಡಿಟಿವಿ ಸಂಪಾದಕರು

ಮಂದೀಪ್ ಪುನಿಯಾ ಅವರ ಬಂಧನ ನನ್ನನ್ನು ಬಹಳ ಕಾಡುತ್ತಿದೆ. ಹತ್ರಾಸ್ ಪ್ರಕರಣದಲ್ಲಿ ಸಿದ್ದೀಕ್ ಕಪ್ಪನ್ ವಿಚಾರ ಏನಾಯ್ತು ಎಂಬುದೇ ಗೊತ್ತಾಗುತ್ತಿಲ್ಲ. ಕಾನ್ಪುರದ ಪತ್ರಕರ್ತ ಅಮಿತ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈಗ ರಾಜ್‌ದೀಪ್ ಸರ್ದೇಸಾಯಿ ಮತ್ತು ಸಿದ್ಧಾರ್ಥ್ ವರದರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪರಿಸ್ಥಿತಿ ನೋಡುವಾಗ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೊನೆಗೊಳ್ಳುವುದೇ ಎಂಬ ಆತಂಕ ಎದುರಾಗಿದೆ.

ಸ್ವಾತಂತ್ರ್ಯದ ಕೂಗಿಗಿಂತ ಜೈಲಿನ ಗೋಡೆಗಳು ಎತ್ತರವಿರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಕಸಿಯಲು ಬಯಸುತ್ತಾರೋ ಅವರು ಇಡೀ ದೇಶವನ್ನು ಬಂಧನದಲ್ಲಿಡಲು ಬಯಸುತ್ತಾರೆ.

ಆತ್ಮೀಯ ಜೈಲರ್ ರವರೇ,

ಭಾರತದ ಇತಿಹಾಸವು ಈ ಕರಾಳ ದಿನಗಳ ಸುರಕ್ಷತೆಯನ್ನು ನಿಮಗೆ ವಹಿಸುತ್ತಿದೆ. ರಾತ್ರೋ ರಾತ್ರಿ “ಅವರ” ಪೊಲೀಸರು ಸ್ವಾತಂತ್ರ್ಯ ಬಯಸುವ ಪತ್ರಕರ್ತರನ್ನು ಬಂಧಿಸಿ ನಿಮ್ಮಲ್ಲಿಗೆ ಕರೆತರಬಹುದು. ಅದಕ್ಕಾಗಿಯೇ ದೂರದೂರುಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಒಂದು ನೆನಪಿರಲಿ, ಮುಂದೊಂದು ದಿನ ನಿಮ್ಮ ಮಕ್ಕಳು ಗೂಗಲ್ ಸರ್ಚ್ ಮಾಡಿ ನಿಮ್ಮನ್ನು ಪ್ರಶ್ನಿಸುತ್ತಾರೆ. ಆಗ ನಾನು ನೌಕರನಷ್ಟೇ ಆಗಿದ್ದೆ. ನಿಜವಾದ ಜೈಲರ್ ಬೇರೊಬ್ಬನಿದ್ದ ಎಂದು ನಿಮ್ಮ ಮಕ್ಕಳಿಗೆ ಹೇಳಿರಿ. ನೀವು ಐಎಎಸ್, ಐಪಿಎಸ್ ಅಧಿಕಾರಿಯಾಗಿದ್ದರೆ ನಿಮ್ಮ ಮಕ್ಕಳು ಪತ್ರಕರ್ತರಾಗದಂತೆ ನೋಡಿಕೊಳ್ಳಿ. ಪತ್ರಕರ್ತರಾಗಿ ಸತ್ಯ ಹೇಳಿದರೆ ಸಣ್ಣ ತಪ್ಪುಗಳನ್ನು ಹುಡುಕಿ ಜೈಲಿಗೆ ಹಾಕಲಾಗುತ್ತದೆ.

ಭಾರತ ಮಾತೆ ಎಲ್ಲವನ್ನೂ ವೀಕ್ಷಿಸುತ್ತಿದ್ದಾಳೆ. ಗೋದಿ ಮೀಡಿಯಾದ ಮುಖ್ಯಸ್ಥರಿಗೆ ಕಿರೀಟಧಾರಣೆ ಮಾಡಲಾಗುತ್ತಿದೆ ಮತ್ತು ಸ್ವತಂತ್ರ ಧ್ವನಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸ್ವತಂತ್ರ ಪತ್ರಕರ್ತರು ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರೈತ ಚಳವಳಿಯ ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಲೈವ್ ಮೂಲಕ ಗ್ರಾಮದಿಂದ ಗ್ರಾಮಕ್ಕೆ ತಲುಪಿರುವುದನ್ನು ರೈತರು ಗಮನಿಸಿದ್ದಾರೆ. ಅವುಗಳನ್ನು ತಡೆಯಲು, ಸಣ್ಣ ತಪ್ಪುಗಳನ್ನು ಹುಡುಕಿ ಅವರ ಮೇಲೆ ಎಫ್‌ಐಆರ್ ಮಾಡಲಾಗುತ್ತಿದೆ.

ಸ್ವಾತಂತ್ರ್ಯದ ಘೋಷಣೆ ಕೂಗುವ ಆ ಸ್ಥಳದ ಮೇಲೆ ಜೈಲರ್ ಕಣ್ಣು ಬಿದ್ದಿದೆ. ಜೈಲರ್ ರವರೇ, ನೀವು ಆ ಜೈಲರ್ ಅಲ್ಲ. ಜೈಲರ್ ಮತ್ತೊಬ್ಬರಿದ್ದಾರೆ. ಆ ಜೈಲರ್ ಈ ಬಾರಿಯ ಬಜೆಟ್ ನಲ್ಲಿ “ಪ್ರಧಾನಿ ಜೈಲು ಬಂಧನ ಯೋಜನೆ” ಪ್ರಾರಂಭಿಸಬಹುದು. ನರೇಗಾ ಯೋಜನೆಯಡಿ ಬರೋ ಗ್ರಾಮಗಳನ್ನು ಜೈಲನ್ನಾಗಿ ಮಾಡಬೇಕು. ಗ್ರಾಮಗಳಲ್ಲಿ ಪ್ರಶ್ನೆ ಕೇಳುವವರನ್ನು ಮತ್ತು ಭಾಷಣ ಮಾಡುವವರನ್ನು ಜೈಲಿಗೆ ಹಾಕಬೇಕು. ಕೊನೆಗೆ ಜೈಲುಗಳನ್ನು ನಿರ್ಮಿಸಿದವನನ್ನು ಮತ್ತು ಜೈಲಿನತ್ತಾ ದಿಟ್ಟಿಸಿದವನನ್ನೂ ಜೈಲಿಗೆ ಹಾಕಬೇಕು. ಇಡೀ ದೇಶದ ಗ್ರಾಮ ಗ್ರಾಮವೇ ನಿಶ್ಯಬ್ದವಾಗಿರಬೇಕು. ಯಾಕೆಂದರೆ “ಪ್ರಧಾನಿ ಜೈಲು ಬಂಧನ ಯೋಜನೆ”ಯನ್ನು ಜೈಲರ್ ಪ್ರಾರಂಭಿಸಿದ್ದಾರೆ ಎಂದು ಘೋಷಿಸಬೇಕು.

ಪ್ರಶ್ನಿಸುವ ಪತ್ರಕರ್ತರನ್ನು ಜೈಲಿನಲ್ಲಿ ಇರಿಸಿದರೆ, ಎರಡು ಬೆಳವಣಿಗೆಗಳು ನಡೆಯಬಹುದು. ಮೊದಲನೆಯದಾಗಿ ಪತ್ರಿಕೆಗಳು ಜೈಲಿನಿಂದ ಹೊರಬರುತ್ತವೆ. ಎರಡನೆಯದಾಗಿ ಜೈಲಿನಿಂದ ಹೊರಗಿರುವ ಪತ್ರಿಕೆಗಳಲ್ಲಿ ಸಾಫ್ಟ್ ಸ್ಟೋರಿಗಳು ಬರಬಹುದು. ಇದು ವಿಶ್ವ ಗುರು ಭಾರತಕ್ಕೆ ಒಳ್ಳೆಯದೇ ? ಯೋಚಿಸಿ.

ಸಿದ್ಧಾರ್ಥ್ ವರದರಾಜನ್, ರಾಜ್‌ದೀಪ್ ಸರ್ದೇಸಾಯಿ, ಅಮಿತ್ ಸಿಂಗ್ ಸೇರಿದಂತೆ ಎಲ್ಲಾ ಪತ್ರಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕೆಂದು ನಾನು ವಿನಂತಿಸುತ್ತೇನೆ. ಮಂದೀಪ್ ಪುನಿಯಾ ಬಿಡುಗಡೆ ಮಾಡಲೇಬೇಕು. ಪ್ರಶ್ನಿಸುವ ಪತ್ರಕರ್ತರ ವಿರುದ್ದ ನಡೆಯುವ ಎಫ್‌ಐಆರ್ ಆಟ ನಿಲ್ಲಬೇಕು.

ಅತ್ಯಂತ ಗಂಭೀರವಾಗಿ ಒಂದು ತಿಳಿದುಕೊಳ್ಳಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ ಎಂದು ಜನ ಅರ್ಥ ಮಾಡಿಕೊಳ್ಳುವ ದಿನ ಬಂದೇ ಬರುತ್ತದೆ. ಆ ದಿನ ಈ ದೇಶದ ಹಳ್ಳಿಗಳ ಗೋಡೆಗಳು, ವಿಮಾನಗಳು ನಿಲ್ದಾಣಗಳು, ಬುಲೆಟ್ ರೈಲುಗಳು, ತರಕಾರಿ ಮಂಡಿಗಳು, ಜಾತ್ರೆಗಳು, ಮಾರುಕಟ್ಟೆಗಳು ಮತ್ತು ಶೌಚಾಲಯ ಗೋಡೆಗಳ ಮೇಲೆ, ಟ್ರಾಕ್ಟರುಗಳು, ಬಸ್ಸುಗಳು ಮತ್ತು ಟ್ರಕ್‌ಗಳ ಹಿಂದೆ ಜನ ಬರೆಯಲು ಪ್ರಾರಂಭಿಸುತ್ತಾರೆ.

“ಗುಲಾಮಿ ಮಾಧ್ಯಮಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಆ ದೇಶದಲ್ಲಿ ಸ್ವಾತಂತ್ರ್ಯ ಇರಲು ಸಾಧ್ಯವಿಲ್ಲ. ಗೋದಿ ಮಾಧ್ಯಮದಿಂದ ಮುಕ್ತವಾದರಷ್ಟೇ ಹೊಸ ಸ್ವಾತಂತ್ರ್ಯ ಬರಲು ಸಾಧ್ಯ”

ಕನ್ನಡಕ್ಕೆ ಅನುವಾದ : ನವೀನ್ ಸೂರಿಂಜೆ