✒ಮುಹಮ್ಮದ್ ಶಫೀಕ್ ಆಲಮ್ ನದ್ವಿ
ಸ್ತ್ರೀ ಸ್ವಾತಂತ್ರ್ಯವೆಂಬ ಮೋಹಕ ಘೋಷಣೆಯು ಪರ್ದಾಧಾರಿ ಮಹಿಳೆಯರನ್ನು ಮನೆಗಳಿಂದ ಬೀದಿಗೆ ತಂದು ಹಾಕಿದೆ. ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಸ್ತ್ರೀ-ಪುರುಷ ಸಮಾನತೆಯನ್ನು ಅವರ ಮನ ಮಸ್ತಿಷ್ಕಗಳಿಗೆ ತುರುಕಿಸಲಾಯಿತು.
ಸ್ತ್ರೀ ಸ್ವಾತಂತ್ರ್ಯದ ಹೆಸರಲ್ಲಿ ಹಸಿರು ಸ್ವರ್ಗ ತೋರಿಸಲಾಯಿತು. ಅವರೊಂದಿಗೆ, ನೀವು ಈ ವರೆಗೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂದಿಗಳಂತೆ ಜೀವಿಸುತ್ತಿದ್ದಿರಿ. ಇನ್ನು ನಿಮಗೆ ಎಲ್ಲ ರೀತಿಯ ಸ್ವಾತಂತ್ರ್ಯವಿದೆ. ಎಲ್ಲಿ ಯಾವಾಗ ಬೇಕಾದರೂ ಸ್ವಚ್ಛಂದವಾಗಿ ತಿರುಗಾಡಬಹುದು. ಆಡಳಿ ತದಲ್ಲೂ ರಾಜಕೀಯದಲ್ಲೂ ಜೀವನದ ಇತರ ರಂಗಗಳಲ್ಲೂ ನಿಮ್ಮನ್ನು ಉನ್ನತ ಹುದ್ದೆಗಳು ಕಾಯುತ್ತಿವೆ. ಜೀವನದ ಎಲ್ಲ ರಂಗಗಳಲ್ಲೂ ನೀವು ಪುರುಷರಿಗೆ ಸಮಾನವಾಗಿದ್ದೀರಿ ಎಂದು ಹೇಳಲಾಯಿತು. ಪ್ರಕೃತಿ ಧರ್ಮವು ಸ್ತ್ರೀಯ ಮೇಲೆ ಯಾವ ಮಾನ ಮರ್ಯಾದೆಯ ಕಿರೀಟವಿಟ್ಟಿತ್ತೊ ಯಾವ ಗೌರವ- ಪ್ರತಿಷ್ಠೆಯ ಭಾರವನ್ನು ಹಾಕಿತ್ತೋ ಅದು ಆಕೆಯನ್ನು ವ್ಯಾಪಾರಿ ಸಂಸ್ಥೆಗಳಿಗೆ ವಿಹಾರದ ವಸ್ತುವಾಗಿ ಮಾರ್ಪಡಿಸಿತು.
ಸ್ತ್ರೀ-ಪುರುಷರ ಸ್ವಚ್ಛಂದ ಮಿಲನವು ಯಾವ ಅನೈತಿಕತೆ, ನೈತಿಕ ಅಪರಾಧಗಳು, ದುಮಾರ್ಗ ಮತ್ತು ಅರಾಜಕ ಸ್ಥಿತಿಯನ್ನುಂಟು ಮಾಡಿದೆಯೋ ಅದು ಕೌಟುಂಬಿಕ ವ್ಯವಸ್ಥೆಯನ್ನು ನುಚ್ಚುನೂರು ಮಾಡಿ ಬಿಟ್ಟಿದೆ. ಕುಲ-ಗೋತ್ರದ ಯಾವ ಕಲ್ಪನೆಯನ್ನೂ ಉಳಿಸಲಿಲ್ಲ. ತ ಲಾಕ್ನ ಹೆಚ್ಚಳವು ಗೃಹ ಜೀವನವನ್ನು ಬರಿದು ಮಾಡಿಬಿಟ್ಟಿದೆ. ಅಶ್ಲೀಲತೆ ಮತ್ತು ಲೈಂಗಿಕ ಅಪರಾಧಗಳು ಮಾನವೀಯ ಮೌಲ್ಯಗಳನ್ನು ತುಳಿದು ಬಿಟ್ಟಿದೆ. ಇದು ಪಾಶ್ಚಾತ್ಯ ದೇಶಗಳ ಸ್ಥಿತಿಯಾಗಿದೆ.
ಪಾಶ್ಚಾತ್ಯ ಸಂಸ್ಕೃತಿಯು ಬೆಳೆದು ಬಂದಾಗ ಅದರ ಹೊಳಪಿನಿಂದ ಮುಸ್ಲಿಮ್ ಸಮಾಜವು ಪ್ರಭಾವಿತಗೊಂಡಿತು. ಸಮೂಹ ಮಾಧ್ಯಮಗಳು, ಟಿ.ವಿ., ಇಂಟರ್ನೆಟ್ ಮತ್ತಿತರ ಪ್ರಚಾರ ಮಾಧ್ಯಮಗಳ ಅಪಾಯಕಾರಿ ಹಾವಳಿಗೆ ತುತ್ತಾಯಿತು. ಪೂರ್ಣವಲ್ಲದಿದ್ದರೂ ಆಂಶಿಕವಾಗಿ ಪರ್ದಾ ರಾಹಿತ್ಯ, ಸ್ತ್ರೀ-ಪುರುಷರ ಸ್ವಚ್ಛಂದ ಮಿಲನಕ್ಕೆ ದಾರಿ ತೆರೆಯಿತು. ಅದು ಪಾಶ್ಚಾತ್ಯ ಸಮಾಜದ ವಿನಾಶ ಮತ್ತು ನೈತಿಕ ದಿವಾಳಿತನದ ಕೊನೆಯ ಅಂಚಿಗೆ ತಲುಪಿಬಿಟ್ಟಿತು.
ಯಾವ ಧರ್ಮವು ಮಸೀದಿಗಳಲ್ಲಿ ಸ್ತ್ರೀಯರು ಪುರುಷರಿಗಿಂತ ಪ್ರತ್ಯೇಕವಾಗಿ ನಿಲ್ಲಬೇಕು. ಈದ್ಗಾನಲ್ಲಿ ಸ್ತ್ರೀ-ಪುರುಷರ ಸೇರುವಿಕೆಯು ಬೇರೆ ಬೇರೆಯಾಗಿರಬೇಕು. ಹಜ್ಜ್ ನಲ್ಲಿ ಸ್ತ್ರೀಯರು ಮತ್ತು ಪುರುಷರು ಜೊತೆಯಾಗಿರದಂತೆ ಜಾಗ್ರತೆ ಪಾಲಿಸಬೇಕು. ಸ್ತ್ರೀಯರು ಜನಾಝಾ(ಶವ) ಯಾತ್ರೆಯಲ್ಲಿ ಪಾಲ್ಗೊಳ್ಳಬಾರದು, ಪುರುಷರೊಂದಿಗೆ ಕಬರಸ್ತಾನಕ್ಕೆ ಹೋಗಬಾರದು ಎಂಬಿತ್ಯಾದಿ ಆದೇಶಿಸಿದೆಯೋ ಅದು ಸ್ತ್ರೀ-ಪುರುಷರು ಸ್ವಚ್ಛಂದವಾಗಿ ಯಾವುದೇ ಮರೆಯಿಲ್ಲದೆ ಒಟ್ಟು ಸೇರುವುದನ್ನು ಹೇಗೆ ಸಹಿಸೀತು?
ವಾಸ್ತವದಲ್ಲಿ ಇಸ್ಲಾಮ್ ಅತ್ಯಂತ ಪಾವನ ಮತ್ತು ಆದರ್ಶ ಸಮಾಜವನ್ನು ಅಸ್ತಿತ್ವಕ್ಕೆ ತರಬಯಸುತ್ತದೆ. ನೈತಿಕ ಮೌಲ್ಯಗಳ ರಕ್ಷಣೆಗೆ ಒಂದು ಬಲಿಷ್ಠ ಕೋಟೆಯನ್ನು ಮತ್ತು ಅದರ ನಾಲ್ಕೂ ಸುತ್ತ ಲಜ್ಜೆ-ನಾಚಿಕೆ, ಸಜ್ಜನಿಕೆ-ಸ್ವಾಭಿಮಾನಗಳ ಗೋಡೆಯನ್ನು ಕಟ್ಟುತ್ತದೆ. ಅದರಲ್ಲಿ ಯಾವುದೇ ದಿಕ್ಕಿನಿಂದ ಅಶ್ಲೀಲತೆ, ಕೆಡುಕು, ನೈತಿಕತೆ, ಉಡಾಳತೆ ಮತ್ತು ಭೋಗಾಸಕ್ತಿಯು ನುಸುಳುವ ಯಾವ ಅವಕಾಶವೂ ಇಲ್ಲದಂತೆ ಮಾಡುತ್ತದೆ.