ಕೊರೋನವೈರಸ್‌ಗೆ ಲಸಿಕೆ ಬರುವವರೆಗೂ ನಾವು ಸುರಕ್ಷಿತವಾಗಿ ಇರಬೇಕು: ಪ್ರಧಾನಿ ನರೇಂದ್ರ ಮೋದಿ

0
368

ಸನ್ಮಾರ್ಗ ವಾರ್ತೆ

ದೆಹಲಿ,ಅ.20: ಕೊರೋನಾ ವೈರಸ್‌ಗೆ ಲಸಿಕೆ ಬರುವವರೆಗೂ ನಾವು ಸುರಕ್ಷಿತವಾಗಿ ಇರಬೇಕು ಎಂದು ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾ ಕರೆ ನೀಡಿದ ಪ್ರಧಾನಿ ಮೋದಿ, ಕೊರೋನಾ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಾಗಿರೋದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅನೇಕ ಜನರು ಈಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ನೀವು ಮಾಸ್ಕ್ ಧರಿಸದೇ ಹೊರನಡೆದರೆ, ನಿಮ್ಮ ಕುಟುಂಬ, ವೃದ್ಧರನ್ನು ತುಂಬಾ ತೊಂದರೆಯಲ್ಲಿರಿಸುತ್ತೀರಿ,” ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೊರೋನ ಕಾಲದಲ್ಲಿ ಸರಣಿ ಹಬ್ಬಗಳು ಬಂದಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೋನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

“ಈ ಹಬ್ಬದ ಸಮಯದಲ್ಲಿ ಮಾರುಕಟ್ಟೆಗಳು ಮತ್ತೆ ತೆರೆದುಕೊಂಡಿದೆ. ಲಾಕ್‌ಡೌನ್ ಕೊನೆಗೊಂಡಿರಬಹುದು ಆದರೆ ಕೋವಿಡ್-19 ಇನ್ನೂ ಮುಂದುವರೆದಿದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಕಳೆದ 7-8 ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ, ಭಾರತವು ಸ್ಥಿರ ಪರಿಸ್ಥಿತಿಯಲ್ಲಿದೆ, ನಾವು ಅದನ್ನು ಹದಗೆಡಲು ಬಿಡಬಾರದು ”ಎಂದು ಪ್ರಧಾನಿ ಮೋದಿ ಹೇಳಿದರು.

ಕೊರೋನ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದ ಪ್ರಧಾನಿ ಮೋದಿ, ಭಾರತ ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು.