ಕಾಣಿಕೆ ಹುಂಡಿಗಳನ್ನು ಗುರಿಯಾಗಿಸಿ ಜಿಲ್ಲೆಯಲ್ಲಿ ಶಾಂತಿ ಕೆದಡಲು ಯತ್ನ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಸ್‌ಡಿಪಿಐ ಆಗ್ರಹ

0
740

ಸನ್ಮಾರ್ಗ ವಾರ್ತೆ

ಮಂಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಸೌಹಾರ್ದತೆಯನ್ನು ಕೆದಡುವಂತಹ ಘಟನಾವಳಿಗಳು ನಡೆಯುತ್ತಿದ್ದು, ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಕಿಡಿಗೇಡಿಗಳು ಉಳ್ಳಾಲ ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿರುವುದು,ಕೊಣಾಜೆ ಗೋಪಾಲಕೃಷ್ಣ ಮಂದಿರದಲ್ಲಿ ಭಗವಾಧ್ವಜಕ್ಕೆ ಮೂತ್ರ ವಿಸರ್ಜನೆ, ಮಂದಿರದ ಅಂಗಳವನ್ನು ಮಲಮೂತ್ರ ಗೈದು ವಿಕೃತಿ ಮೆರೆದಿರುವಂತಹ ಹಲವಾರು ಘಟನಾವಳಿಗಳು ನಡೆದಿದ್ದು, ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ವಿಕೃತಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಲವಾರು ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ವಿಕೃತಿಯನ್ನು ಮರೆದು ಪರಸ್ಪರ ಕೋಮು ದ್ವೇಷವನ್ನು ಮತ್ತು ಧರ್ಮಗಳ ಮದ್ಯೆ ಕಂದಕವನ್ನು ಸೃಷ್ಟಿಸುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದು, ಇದು ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕೆದಡಿಸುವ ಷಡ್ಯಂತರದ ಭಾಗವಾಗಿದೆ.

ಈ ಹಿಂದೆ ಚಾಮರಾಜನಗರದಲ್ಲಿ ದೇವಸ್ಥಾನಕ್ಕೆ ಹಂದಿ ಮಾಂಸ ಎಸೆದು ಅದನ್ನು ನಿರ್ದಿಷ್ಟ ಸಮುದಾಯದ ಮೇಲೆ ಹಣೆಯಲು ಪ್ರಯತ್ನ ಪಟ್ಟಿದ್ದರು. ಅಲ್ಲಿಯ ಪೋಲಿಸರ ನಿಷ್ಪಕ್ಷ ಪಾತ ತನಿಖೆಯಿಂದಾಗಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯ ವಾಗಿತ್ತು.

ಇಂತಹ ಘಟನೆಗಳಿಗೆ ಕೋಮು ಸೂಕ್ಷ್ಮ ಪ್ರದೇಶವಾದ ದ.ಕ ಜಿಲ್ಲೆಯಲ್ಲಿ ಆಸ್ಪದ ಕೊಡದೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಮಂದಿರಗಳಲ್ಲಿ ವಿಕೃತಿ ಮೆರದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.