ತೊಕ್ಕೊಟ್ಟು ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಪ್ರಕರಣ ಭೇದಿಸಿದ ಪೊಲೀಸರು: ಹೆಚ್ಚುವರಿ ತುಂಡು ನೀಡದ್ದಕ್ಕೆ ಕೃತ್ಯವೆಸಗಿದೆ ಎಂದ ಆರೋಪಿ

0
969

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ವಾರ ಉದ್ವಿಗ್ನತೆ ಸೃಷ್ಟಿಸಲು ಕಾರಣವಾಗಿದ್ದ ತೊಕ್ಕೊಟ್ಟುವಿನ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಪ್ರಕರಣವನ್ನು ಒಂದೇ ವಾರದಲ್ಲಿ ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ತೊಕ್ಕೊಟ್ಟು ಒಳಪೇಟೆ ನಿವಾಸಿ ನಾಗರಾಜ (37) ಎಂಬಾತನನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ನಾಗರಾಜನು ಬಾಡಿಗೆ ಮನೆ ಮಾಡಿಕೊಂಡಿದ್ದು, ತಾಯಿ ಜೊತೆ ವಾಸವಿದ್ದ. ತೊಕ್ಕೋಟ್ಟಿನ ಬೀಫ್ ಸ್ಟಾಲ್‌ನಿಂದ ಹಲವು ಬಾರಿ ಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದ. ಈ ಹಿಂದೆ ಮಾಂಸದಂಗಡಿ ಮಾಲಕರಲ್ಲಿ ನಿಗದಿತ ಬೆಲೆಗಿಂತ ಅಧಿಕ ಮಾಂಸ ನೀಡುವಂತೆ ಒತ್ತಾಯಿಸಿದ್ದನು. ಈ ವೇಳೆ ಹಣ ಕೊಟ್ಟಷ್ಟೇ ಮಾಂಸ ನೀಡುವುದು, ಹೆಚ್ಚುವರಿ ನೀಡಲಾಗದು ಎಂದು ಅಂಗಡಿಯಾತ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡು ಆರೋಪಿ ಈ ದುಷ್ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕಮಿಷನರ್ ತಿಳಿಸಿದ್ದಾರೆ.

ಆರೋಪಿಯು ಅದೇ ದಿನ ಸೀಮೆಎಣ್ಣೆ ಹಾಗೂ ಬೆಂಕಿ ಪೊಟ್ಟಣ ಖರೀದಿಸಿದ್ದನು. ಜ.9ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಮಾಂಸದಂಗಡಿ ಬಳಿ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಘಟನೆಯ ಬಗ್ಗೆ ತನ್ನ ತಾಯಿಯ ಬಳಿಯು ಈ ಬಗ್ಗೆ ಹೇಳಿಕೊಂಡಿದ್ದಾನೆ. ಕುಡಿದ ನಶೆಯಲ್ಲಿ ಸುಳ್ಳು ಹೇಳಿದ್ದಾನೆಂದು ಅಂದುಕೊಂಡ ತಾಯಿ ಸುಮ್ಮನೆ ಮಲಗಲು ಹೇಳಿದ್ದಾರೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದ ಮೇಲೆ ತಾಯಿಗೆ ನೈಜಾಂಶ ತಿಳಿದು ಬಂದಿತ್ತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದರು. ಮಾಂಸದಂಗಡಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಆರೋಪಿಯೇ ಕೃತ್ಯ ನಡೆಸಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಖಚಿತವಾಗಿದೆ. ಪೂರಕ ದಾಖಲೆಗಳ ಸಂಗ್ರಹದ ಬಳಿಕವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಈತನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೃತ್ಯ ನಡೆಸಿರುವುದನ್ನು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.