ಮುಂಬೈ, ಮಾ. 29: ಐದು ವರ್ಷದ ಬಿಜೆಪಿ-ಶಿವಸೇನೆಯ ಅಧಿಕಾರದಡಿಯಲ್ಲಿ ರೈತರು ಅನುಭವಿಸಿದ ಬವಣೆಯನ್ನು ಮತವನ್ನಾಗಿ ಬದಲಾಯಿಸಲು ಕಾಂಗ್ರೆಸ್-ಎನ್ಸಿಪಿ ಸಖ್ಯ ಹರಸಾಹಸದಲ್ಲಿ ತೊಡಗಿದೆ. ಮಹಾರಾಷ್ಟ್ರದ 48 ಲೋಕಸಭಾ ಸೀಟುಗಳಲ್ಲಿ ಹತ್ತು ಕ್ಷೇತ್ರಗಳು ವಿದರ್ಭ ವಲಯದಲ್ಲಿ ಬರುತ್ತದೆ. ನಾಗಪುರದಲ್ಲಿ ಎರಡನೆ ಬಾರಿ ಸಂಸದನಾಗುವ ನಾಗಲೋಟಕ್ಕೆ ಮಾಜಿ ಬಿಜೆಪಿ ಸಂಸದ ನಾನಾ ಪಟೋಲೆ ಅಡ್ಡಗಾಲು ಹಾಕಿಯಾರೆ ಎಂಬ ಕುತೂಹಲ ಎಲ್ಲೆಡೆ ಕೆರಳಿದೆ. ನಿತಿನ್ ಗಡ್ಕರಿ ಮತ್ತು ಚಂದ್ರಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕನೆ ಬಾರಿ ಕಣದಲ್ಲಿರುವ ಕೇಂದ್ರ ಗೃಹ ಸಹ ಸಚಿವ ಹನ್ಸ್ರಾಜ್ ಅಹಿರ್ ವಿದರ್ಭ ವಲಯದಲ್ಲಿ ಚುನಾವಣಾ ಕಣದಲ್ಲಿರುವ ಬಿಜೆಪಿಯ ಪ್ರಮುಖರು.
ಪ್ರಧಾನಿ ನರೇಂದ್ರ ಮೋದಿಯ ಸರ್ವಾಧಿಕಾರ ಮತ್ತು ರೈತ ವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿಗೆ ಮಾಜಿ ಸಂಸದ ನಾನಾ ಪಟೋಲೆ, ಮಾಣಿಕ್ರಾವ್ ಠಾಕ್ರೆ, ರಾಜೀನಾಮೆ ನೀಡಿದ್ದರು. ಇವರಲ್ಲದೆ ದಕ್ಷಿಣ ಭಾರತದ ನಟಿ ನವ್ನೀತ್ ಕೌರ್ ಕಾಂಗ್ರೆಸ್ ಸಖ್ಯದಲ್ಲಿ ಚುನಾವಣಾ ಕ್ಷಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ನಾನಾ ಪಟೊಲೆ ಗಡ್ಕರಿಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಎರಡು ಕಡೆ ವಂಚಿತ್ ಬಹುಜನ್ ಅಗಾಡಿ ಅಧ್ಯಕ್ಷ ಡಾ.ಬಿ.ಆರ್ ಅಂಬೇಡ್ಕರ್ ರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸ್ಪರ್ಧಿಸುತ್ತಿದ್ದಾರೆ.
ವಿದರ್ಭ ಕೃಷಿ ಪ್ರಧಾನ ಪ್ರದೇಶವಾಗಿದೆ. ಐದು ವರ್ಷದ ಹಿಂದೆ ಆರಂಭಗೊಂಡ ರಾಷ್ಟೀಯ ಹೆದ್ದಾರಿ, ರೈಲ್ವೆಮಾರ್ಗ, ನೀರಾವರಿ, ಅಂತಾರಾಷ್ಟ್ರೀಯ ಕಾರ್ಗೊ ಹಬ್ ಇತ್ಯಾದಿ ಯೋಜನೆಗಳು ಬಿಜೆಪಿಯ ಪ್ರಚಾರ ಬತ್ತಳಿಕೆಯಲ್ಲಿವೆ. ಕಾಂಗ್ರೆಸ್ ಆಡಳಿತಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾದೆವು ಎನ್ನುವ ಜನರ ಭಾವನೆಯ ಲಾಭವೆತ್ತಲು ಬಿಜೆಪಿ ಯತ್ನಿಸುತ್ತಿದೆ.
ಆದರೆ ಈ ಹೊಸ ಯೋಜನೆಗಳಿಂದ ನಮ್ಮ ಜೀವನಕ್ಕೆ ಲಾಭವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಳೆದವರ್ಷ ವಿದರ್ಭದ ವiರಾಠವಾಡದಲ್ಲಿ 1297 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಖರ್ಚಿನ ಶೇ.50ರಷ್ಟು ಲಾಭ, ಉತ್ಪನ್ನಗಳಿಗೆ ಕನಿಷ್ಠ ದರ ನಿಗದಿ ಇತ್ಯಾದಿ ಭರವಸೆಗಳು ಕಾಗದಕ್ಕೆ ಸೀಮಿತವಾಗಿದೆ ಎಂದು ರೈತ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಜಯ್ ಜವಾಂತಿಯ ಹೇಳುತ್ತಾರೆ. ರೈತಜಮೀನು ನೀರಿಲ್ಲದೆ ಬತ್ತಿಹೋಗಿವೆ.
ಆರಂಭದಲ್ಲಿ ವಿದರ್ಭ ಕಾಂಗ್ರೆಸ್ನ ಜೊತೆ ಇತ್ತು. ನಂತರ ವಿದರ್ಭ ರಾಜ್ಯ ವಾದ ಕಡೆಗಣಿಸಿದ್ದು ಕಾಂಗ್ರೆಸ್ಸಿಗೆ ತಿರುಗೇಟಾಯಿತು. 2014ರಲ್ಲಿ ಹತ್ತು ಲೋಕಸಭಾ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಬಿಜೆಪಿ , ಶಿವಸೇನಾ ಸಖ್ಯ ಗೆದ್ದುಕೊಂಡಿದೆ. 2014ರಲ್ಲಿ ಮೋದಿ ಅಲೆಯಿಂದಾಗಿ ನಾಗಪುರದಲ್ಲಿ ನಿತಿನ್ ಗಡ್ಕರಿ ವಿಜಯಿಯಾಗಿದ್ದರು. ಹತ್ತಕ್ಕೆ ಹತ್ತು ಲೋಕಸಭಾ ಸೀಟು ಬಿಜೆಪಿ ಪಾಲಾಗಿದ್ದವು. ಹತ್ತು ಸೀಟಿನಲ್ಲಿಯೂ ದಲಿತ ಮತಗಳು ನಿರ್ಣಾಯಕವಾಗಿದೆ.