ರಾಣಾ ಅಯ್ಯೂಬ್, ರವೀಶ್ ಕುಮಾರ್ ಬಳಿಕ ಇದೀಗ ಬರ್ಖಾ ದತ್ ಗೆ ಜೀವ ಬೆದರಿಕೆ: ಅವರು ಹೇಳಿದ್ದೇನು?

ನ್ಯೂಸ್ ಡೆಸ್ಕ್

ಖ್ಯಾತ ಪತ್ರಕರ್ತರಾದ ರಾಣಾ ಆಯ್ಯೂಬ್ ಮತ್ತು ರವೀಶ್ ಕುಮಾರ್ ಗೆ ಜೀವ ಬೆದರಿಕೆಗಳು ಬಂದ ವಾರದೊಳಗೆ ಟಿವಿ ಪತ್ರಕರ್ತೆ ಮತ್ತು ಬರಹಗಾರ್ತಿ ಬರ್ಖಾ ದತ್ ಅವರಿಗೂ ಜೀವ ಬೆದರಿಕೆಗಳು ಬಂದಿವೆ.
ನಾನು ಮತ್ತು ನನ್ನ ಕುಟುಂಬ ಕಣ್ಗಾವಲಿನಲ್ಲಿರುವುದಾಗಿಯೂ ನಾನು ಯಾವುದೇ ಹೊಸ ಯೋಜನೆ ಕೈಗೊಳ್ಳದಂತೆ ತಡೆಯುವ ಉದ್ದೇಶ ಈ ಬೆದರಿಕೆ ಸಂದೇಶಗಳ ಹಿಂದೆ ಇದೆಯೆಂದೂ ಅವರು ಈ ಬಗ್ಗೆ ಟ್ವೀಟ್ ಮಾಡಿ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ನಿನ್ನ ಮನೆಯನ್ನು ನೀನು ಸರಿಪಡಿಸಿಕೊ ಎಂದು ಬೆದರಿಕೆದಾರರು ಧಮಕಿ ಹಾಕಿದ್ದಾರೆ, ಇದೇನು ನನ್ನ ದೇಶವೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬರ್ಖಾ ದತ್ ಅವರು ಈ ಮೊದಲು ಎನ್ ಡಿ ಟಿವಿ ಯ ಪ್ರಮುಖ ನಿರೂಪಕಿಯಾಗಿ ಗುರುತಿಸಿಕೊಂಡವರು. ಮಾತ್ರವಲ್ಲ, ಹತ್ತು ಹಲವು ಸಾಹಸಮಯ ತನಿಖಾ ವರದಿಗಳನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವರು. ಬಿಜೆಪಿಯ ರಾಜಕೀಯ ಧೋರಣೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಪ್ರಬಲ ಟೀಕಾಕಾರರಾಗಿ ಗುರುತಿಸಿಕೊಂಡವರು. ಹಾಗೆ ರವೀಶ್ ಕುಮಾರ್ ಕೂಡ ಎನ್ ಡಿ ಟಿವಿಯಲ್ಲಿ ಸದ್ಯ ನಿರೂಪಕರಾಗಿ ಸಾಕಷ್ಟು ಚರ್ಚೆಯಲ್ಲಿರುವವರು. ರಾಣಾ ಆಯ್ಯೂಬ್ ಅಂತೂ ಗುಜರಾತ್ ಹತ್ಯಾಕಾಂಡ ತನಿಖಾ ಬರಹದಿಂದಾಗಿ ಗಮನಸೆಳೆದವರು. ಮೂವರೂ ಬಿಜೆಪಿ ಮಾದರಿ ರಾಜಕೀಯದ ಪ್ರಬಲ ಟೀಕಾಕಾರರು.